ADVERTISEMENT

ಕಸದ ತೊಟ್ಟಿಯಾದ ಗಜಾಗುಂಡ್ಲ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 8:55 IST
Last Updated 12 ಸೆಪ್ಟೆಂಬರ್ 2011, 8:55 IST

ಮಾಲೂರು: ಪಟ್ಟಣದ ಜನತೆಗೆ ಒಂದು ಕಾಲದಲ್ಲಿ ಕುಡಿಯುವ ನೀರಿಗೆ ಆಧಾರವಾಗಿದ್ದ ಗಜಾಗುಂಡ್ಲವನ್ನು (ನೀರಿನ ಕೊಳ) ಗಿಡಗಂಟೆ ಬೆಳೆದ ಕಸದ ತೊಟ್ಟಿಯಾಗಿದೆ.

ಪಟ್ಟಣದ ಹೃದಯಭಾಗದ ಗಜಾಗುಂಡ್ಲ ದಶಕದ ಹಿಂದೆ ತನ್ನ ಒಡಲಿನಲ್ಲಿ ಸಮೃದ್ಧ ಡಸಿಹಿಯಾದ ನೀರನ್ನು ತುಂಬಿಕೊಂಡು ಇಡೀ ತಾಲ್ಲೂಕಿನಲ್ಲೇ ಮನೆ ಮಾತಾಗಿತ್ತು. 200 ವರ್ಷಗಳ ಹಿಂದೆ ನೀರಿನ ಸಮಸ್ಯೆ ನಿವಾರಿಸುವ ಸಲುವಾಗಿ ಅಂದಿನ  ಜಮೇದಾರ್ ಹೃದಯರಾಮ್‌ಸಿಂಗ್ ಅವರು ಕೋದಂಡರಾಮಸ್ವಾಮಿ ಮತ್ತು ಮಾರಿಕಾಂಭ ದೇವಾಲಯಗಳ ಮಧ್ಯೆ ಪುಷ್ಕರಣಿ ನಿರ್ಮಿಸಿದರು ಎನ್ನಲಾಗಿದೆ.

ಪಟ್ಟಣದಲ್ಲಿ ಬೀಳುವ ಮಳೆ ನೀರು ಹರಿದು ನೇರವಾಗಿ ಶೇಖರಣೆ ಆಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಕಾರಂಜಿ ಕಟ್ಟೆಯಿಂದ ನೀರು ಹರಿದು ಬರುವಂತೆ ಕಾಲುವೆ ನಿರ್ಮಿಸಲಾಗಿತ್ತು. ಇದರಿಂಸ ಬೇಸಿಗೆ ಕಾಲದಲ್ಲೂ ಸಹ ಕೊಳದಲ್ಲಿ ನೀರು ತುಂಬಿರುತ್ತಿತ್ತು. ಕೊಳ ಉಸ್ತುವಾರಿಗಾಗಿ ಗೂರ್ಖವನ್ನು ನೇಮಿಸಿ ಸುಚಿತ್ವ ಕಾಪಾಡಲಾಗಿತ್ತು. 4 ದಿಕ್ಕುಗಳಲ್ಲಿ ವಿಶಾಲವಾದ ಮೆಟ್ಟುಲಗಳನ್ನು ಹೊಂದಿದ್ದ ಗಜಾಗುಂಡ್ಲ ರಕ್ಷಣೆಗಾಗಿ ಸುತ್ತಲು ಕಲ್ಲು ಚಪ್ಪಡಿಗಳನ್ನು ನೆಟ್ಟು ಒಂದು ಭಾಗದಲ್ಲಿ ಮಾತ್ರ ಬಾಗಿಲು ಇರಿಸಲಾಗಿತ್ತು.

ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಕೊಳಕ್ಕೆ ನೀರು ಹರಿದು ಬರುತ್ತಿದ್ದ ಕಾಲುವೆ ಮುಚ್ಚಿಹೋಗಿದ್ದು, ಕೊಳದಲ್ಲಿ ನೀರು ಬತ್ತಿಹೋಗಿದೆ. ಸೂಕ್ತ ನಿರ್ವಹಣೆ ಇಲ್ಲದೆ ಗಿಡಗಂಟೆ ಮತ್ತು ಮುಳ್ಳಿನಗಿಡಗಳು ಬೆಳೆದು ನಿಂತಿವೆ. ಪೂರ್ವಿಕರು ಜೋಪಾನ ಮಾಡಿಕೊಂಡು ಬಂದ ಐತಿಹಾಸಿಕ ಗಜಾಗುಂಡ್ಲ ಈಗ ಕಸದ ತೊಟ್ಟಿಯಾಗಿದೆ.

ಈ ಕೊಳದಲ್ಲಿ ನಡೆಯುತ್ತಿದ್ದ ತೆಪ್ಪೋತ್ಸವ ಮುಂತಾದ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಸವಿನೆನಪುಗಳನ್ನು ಮೆಲಕು ಹಾಕುತ್ತಾ ಪಟ್ಟಣದ ನಿವಾಸಿ 92 ವರ್ಷದ ವಯೋವೃದ್ಧರಾದ ಎಂ.ಆರ್.ವೆಂಕಟಪ್ಪ ಪತ್ರಿಕೆಯೊಂದಿಗೆ ಮಾತನಾಡಿ ಕಳೆದು ಹೋದ ದಿನಗಳ ಬಗ್ಗೆ ಕಣ್ಣಲ್ಲಿ ನೀರು ತುಂಬಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.