ADVERTISEMENT

ಕೈಕೊಟ್ಟ ಶೇಂಗಾ: ಕಂಗಾಲಾದ ರೈತ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 10:15 IST
Last Updated 13 ಸೆಪ್ಟೆಂಬರ್ 2011, 10:15 IST

ಶಿರಾ: ತಾಲ್ಲೂಕಿನಲ್ಲಿ ಶೇಂಗಾ ಬಿತ್ತನೆ ಮಾಡಿದ ರೈತರು ಕಂಗಾಲಾಗುವ ಪರಿಸ್ಥಿತಿ ಎದುರಾಗಿದೆ.
ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಶೇಂಗಾ ಬಿತ್ತನೆಗೆ ರೈತರು ಜೂನ್ 2ನೇ ವಾರದಲ್ಲೇ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಆದರೆ ಮಳೆರಾಯ ಕೈಕೊಟ್ಟು ಬಿಸಿ ಮುಟ್ಟಿಸಿದ. ಇದರಿಂದ ಗಾಬರಿಗೊಂಡ ರೈತರು ಬಿತ್ತನೆಗೆ ಸಿದ್ದ ಮಾಡಿಕೊಂಡಿದ್ದ ಶೇಂಗಾ ಬೀಜ, ಗೊಬ್ಬರವನ್ನು ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡಿಕೊಂಡರು.

ಇನ್ನು ಕೆಲ ರೈತರು ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ, ಮಳೆ ಬಂದೇ ಬರುತ್ತದೆ, ನಮ್ಮ ಪ್ರಯತ್ನ ನಾವು ಮಾಡೋಣ ಎಂದು ಮಳೆಗಾಗಿ ಕುರಿ-ಕೋಳಿ ಬಲಿ, ನೈವೇದ್ಯ ಎಂದು ದೇವರು ಮೊರೆ ಹೋದರು!

ನಂತರ ಅಲ್ಪಸ್ವಲ್ಪ ಮಳೆ ಬಂದಿದ್ದೇ ತಡ ಭೂಮಿಯಲ್ಲಿ ಹದ (ತೇವಾಂಶ) ಇದೆಯೋ ಇಲ್ಲವೋ ಎಂದು ನೋಡದೆ ಶೇಂಗಾ ಬಿತ್ತನೆಗೆ ಕಾಲಾವಧಿ ಮುಗಿಯುತ್ತದೆ ಎಂದು ಕೆಲವೆಡೆ ಬಿತ್ತನೆ ಕೂಡ ಮಾಡಿದರು.

ಇಷ್ಟಾಗಿಯೂ ಕೃಷಿ ಇಲಾಖೆ ಅಂಕಿ ಅಂಶದ ಪ್ರಕಾರವೇ ಈ ವರ್ಷದ ಶೇಂಗಾ ಬಿತ್ತನೆ ಗುರಿ 45,530 ಹೆಕ್ಟೇರ್ ಪ್ರದೇಶ ಇದ್ದು, ಅದರಲ್ಲಿ 23,750 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಸಾಧ್ಯವಾಗಿದೆ.

ಬಿತ್ತನೆಯಾಗಿರುವ ಶೇಂಗಾ ಬೆಳೆಗೂ ಈಗಾಗಲೇ ಸುರಳಿಪೂಚಿ ಕೀಟದ ಬಾಧೆ ಹಾಗೂ ಕಪ್ಪು ಚುಕ್ಕೆಗಳ (ಕರಿಶೀಡೆ) ಟಿಕ್ಕಾರೋಗ ಕಾಣಿಸಿಕೊಂಡಿದೆ. ಜೊತೆಗೆ ಮತ್ತೆ ಮಳೆ ಮಗಿಲು ಸೇರಿದ್ದು, ಅಲ್ಪ ಸ್ವಲ್ಪ ಇದ್ದ ಬೆಳೆಯೂ ಒಣಗುತ್ತಿದೆ.

ತಾಲ್ಲೂಕಿನ ಐದು ಹೋಬಳಿಗಳ ಪೈಕಿ ಹುಲಿಕುಂಟೆ ಹಾಗೂ ಗೌಡಗೆರೆ ಹೋಬಳಿಯಲ್ಲೇ ಕೊಂಚ ಹೆಚ್ಚು ಶೇಂಗಾ ಬಿತ್ತನೆಯಾಗಿದ್ದು, ರೋಗ ಹಾಗೂ ಮಳೆ ಅಭಾವದಿಂದ ಈ ಹೋಬಳಿಯ ರೈತರು ತೀವ್ರ ಕಂಗಾಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.