ADVERTISEMENT

ಗ್ರಾ.ಪಂ.ಗೆ ಬೀಗ ಜಡಿದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 6:00 IST
Last Updated 4 ಫೆಬ್ರುವರಿ 2011, 6:00 IST

ಮಾಲೂರು: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ, ಸಮರ್ಪಕವಾಗಿ ನೀರು ಸರಬರಾಜು ಮಾಡಬೇಕೆಂದು ಒತ್ತಾಯಿಸಿ ತಾಲ್ಲೂಕಿನ ದೊಡ್ಡಶಿವಾರ ಗ್ರಾಮದ ಮಹಿಳೆಯರು ಮತ್ತು ಕಸಬಾ ಬ್ಲಾಕ್ ಯುವ ಕಾಂಗ್ರೆಸ್  ಕಾರ್ಯಕರ್ತರು ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಖಾಲಿ  ಕೊಡಗಳೊಂದಿಗೆ ಧರಣಿ  ನಡೆಸಿ ಗುರುವಾರ ಪ್ರತಿಭಟನೆ ನಡೆಸಿದರು.

ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಕಸಬಾ ಬ್ಲಾಕ್ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಪಾಪರೆಡ್ಡಿ ದೊಡ್ಡಶಿವಾರ ಗ್ರಾಮದಲ್ಲಿ ಕಳೆದ 3 ತಿಂಗಳಿನಿಂದ ಕುಡಿಯುವ ನೀರಿನ ಬವಣೆ ಎದುರಾಗಿದ್ದರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಬೇಸಿಗೆ ಪ್ರಾರಂಭವಾಗುವುದಕ್ಕೆ ಮುಂಚಿತವಾಗಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದರು.

ತಾತ್ಕಾಲಿಕವಾಗಿ ಒಂದು ಟ್ಯಾಂಕರ್ ನೀರನ್ನು ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತಿದೆ. ಆದರೆ ಒಂದೂವರೆ ಸಾವಿರ ಜನಸಂಖ್ಯೆ  ಹೊಂದಿರುವ ಗ್ರಾಮಕ್ಕೆ ಒಂದು ಟ್ಯಾಂಕರ್ ನೀರು ಸಾಕಾಗುತ್ತಿಲ್ಲ. ಕುಡಿಯಲು ಸಾಕಾಗುವಷ್ಟು ನೀರು ಸರಬರಾಜು ಮಾಡಲು ಗ್ರಾ.ಪಂ ಮುಂದಾಗದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ಪ್ರತಿಭಟನೆಯ ನೇತೃತ್ವವನ್ನು ಲಕ್ಷ್ಮಮ್ಮ, ಸುಮಿತ್ರಮ್ಮ, ಸರಸ್ವತಮ್ಮ, ವರಲಕ್ಷ್ಮಮ್ಮ, ಮಂಜುನಾಥ್, ಹರೀಷ್, ಶ್ರೀನಿವಾಸರೆಡ್ಡಿ, ನಾಗರಾಜ್ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.