ADVERTISEMENT

ದ್ರವ ರೂಪದ ಗೊಬ್ಬರ: ಎಚ್ಚರಿಕೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 8:04 IST
Last Updated 2 ಜುಲೈ 2013, 8:04 IST

ಶ್ರೀನಿವಾಸಪುರ: ರೈತರು ಹನಿ ನೀರಾವರಿ ಮೂಲಕ ತೋಟದ ಬೆಳೆಗೆ ದ್ರವ ರೂಪದ ರಾಸಾಯನಿಕ ಗೊಬ್ಬರ ನೀಡುವಾಗ ವಿಶೇಷ ಎಚ್ಚರಿಕೆ ವಹಿಸಬೇಕು. ರಾಸಾಯನಿಕ ಮಿಶ್ರಿತ ನೀರು ಜಾನುವಾರುಗಳಿಗೆ ಸಿಗದಂತೆ ನೋಡಿಕೊಳ್ಳಬೇಕು ಎಂದು ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ವೆಂಕಟಾಚಲ ಮನವಿ ಮಾಡಿದ್ದಾರೆ.

ನೀರಿನ ಸದ್ಬಳಕೆ ದೃಷ್ಟಿಯಿಂದ ರೈತರು ಹನಿ ನೀರಾವರಿ ಪದ್ಧತಿ ಅನುಸರಿಸುತ್ತಿರುವುದು ಸ್ವಾಗತಾರ್ಹ. ಆದರೆ ಈಚಿನ ದಿನಗಳಲ್ಲಿ ಆಕಸ್ಮಿತವಾಗಿ ರಾಸಾಯನಿಕ ಗೊಬ್ಬರ ಮಿಶ್ರಿತ ನೀರು ಸೇವನೆಯಿಂದ ಸೀಮೆ ಹಸು ಮತ್ತಿತರ ಪ್ರಾಣಿಗಳು ಸಾಯುತ್ತಿರುವ ಘಟನೆಗಳು ಹೆಚ್ಚಿವೆ. ಇಂದು ಕೆರೆ ಕುಂಟೆಗಳು ಬತ್ತಿಹೋಗಿರುವುದರಿಂದ ಮೊಲ, ಅಳಿಲಿನಂಥ ಪ್ರಾಣಿಗಳು ಹಾಗೂ ಹಕ್ಕಿಗಳು ಹನಿ ನೀರಾವರಿ ಮೂಲಕ ಹನಿಯುವ ನೀರಿಗೆ ಬಾಯಿ ಇಡುತ್ತಿವೆ. ಅವೂ ರಾಸಾಯನಿಕ ಮಿಶ್ರಿತ ನೀರು ಕುಡಿದು ಸಾವನ್ನಪ್ಪುತ್ತಿವೆ ಎಂದು ಸೋಮವಾರ `ಪ್ರಜಾವಾಣಿ'ಗೆ ತಿಳಿಸಿದರು.

ಯಾವುದೇ ವೈಜ್ಞಾನಿಕ ನಡವಳಿಕೆ ಮುಗ್ಧ ಜೀವಿಗಳ ಪ್ರಾಣಕ್ಕೆ ಸಂಚಕಾರ ತರಬಾರದು. ಆ ದೃಷ್ಟಿಯಿಂದ ಹನಿ ನೀರಾವರಿಗೆ ಅಳವಡಿಸಿರುವ ಪೈಪ್‌ಗಳ ಮೂಲಕ ರಾಸಾಯನಿಕ ಗೊಬ್ಬರ ನೀಡುವ ರೈತರು, ಗೊಬ್ಬರ ನೀಡಿದ ಬಳಿಕ ಶುದ್ಧ ನೀರನ್ನು ಪೈಪ್‌ಗಳಲ್ಲಿ ಹರಿಸಿ ರಾಸಾಯನಿಕದ ತೀವ್ರತೆಯನ್ನು ಕಡಿಮೆ ಮಾಡಬೇಕು. ಗೊಬ್ಬರ ಹಾಕಿದ ತೊಟ್ಟಿಗಳನ್ನು ತೊಳೆಯಬೇಕು. ರಾಸಾಯನಿಕ ಗೊಬ್ಬರ ಬೆರೆಸಿದ ನೀರನ್ನು ಬಳಸದೆ ಕಾಯ್ದಿರಿಸಬಾರದು ಎಂದು ಸಲಹೆ ಮಾಡಿದ್ದಾರೆ.

ಬೆಳೆಗೆ ದ್ರವರೂಪದ ರಾಸಾಯನಿಕ ಗೊಬ್ಬರ ನೀಡುವ ಸಂದರ್ಭದಲ್ಲಿ ಪ್ರಾಣಿ- ಪಕ್ಷಿ ನೀರು ಕುಡಿಯದಂತೆ ನೋಡಿಕೊಳ್ಳುವುದು ಒಳ್ಳೆಯದು. ಇಲ್ಲವಾದರೆ ಅವು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.