ADVERTISEMENT

ನೀರಿಗಾಗಿ ಆಗ್ರಹಿಸಿ ಪುರಸಭೆಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 6:09 IST
Last Updated 27 ಡಿಸೆಂಬರ್ 2012, 6:09 IST

ಗೌರಿಬಿದನೂರು: ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ 1ರ ಕರೇಕಲ್ಲಹಳ್ಳಿ, ವಿದ್ಯಾನಗರ, ಕೆಎಲ್‌ಎನ್ ಬಡಾವಣೆ, ಸ್ವಾಗತ್ ಬಡಾವಣೆಗೆ 20 ದಿನಗಳಿಂದ ಸಮರ್ಪಕವಾಗಿ ನೀರು  ಪೂರೈಕೆ ಯಾಗುತ್ತಿಲ್ಲ ಎಂದು ಆರೋಪಿಸಿ ಮಹಿಳೆಯರು ಬುಧವಾರ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪಟ್ಟಣದ ವಾರ್ಡ್ 1ರಲ್ಲಿ ಕಳೆದ 20 ವರ್ಷ ಗಳಿಂದ ವಾಸಿಸುತ್ತಿದ್ದರೂ ಸರಿಯಾದ ಚರಂಡಿ, ರಸ್ತೆ, ಬೀದಿ ದೀಪಗಳಿಲ್ಲ. ಖಾಲಿ ನಿವೇಶನಗಳಲ್ಲಿ ಗಿಡಗಂಟೆ ಬೆಳದು ನಿಂತಿವೆ. ರಾತ್ರಿ ಸಮಯದಲ್ಲಿ ಬೀದಿ ದೀಪಗಳಿಲ್ಲದೆ ಮಹಿಳೆಯರು ಮಕ್ಕಳು ಮನೆಯಿಂದ ಹೊರಬರಲು ಹೆದರುವಂತಾಗಿದೆ. ಈ ಭಾಗದಲ್ಲಿ ಯಾವುದೇ ರೀತಿಯ ಮೂಲ ಸೌಕರ್ಯಗಳಿಲ್ಲದೆ ವಂಚಿತರಾಗಿದ್ದಾರೆ.

ಈ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಮನೆಗಳಿಗೆ ಇಲ್ಲಿನ ವಾಟರ್‌ಮ್ಯಾನ್ ನೀರು ಬಿಡುವುದರಿಂದ ಉಳಿದ ಮನೆಗಳಿಗೆ ನೀರಿಲ್ಲದಂತಾಗಿದೆ. ಇವರ ವಿರುದ್ಧ ಪುರಸಭೆ ಅಧಿಕಾರಿಗಳಿಗೆ ಈ ಭಾಗದ ಜನಪ್ರತಿನಿಧಿಗಳಿಗೆ ನೀರು ಸಮರ್ಪಕವಾಗಿ ಸರಬರಾಜು ಮಾಡುತ್ತಿಲ್ಲವೆಂದು ಹಲವು ಬಾರಿ  ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ಬದಲಾಯಿಸಿ ಸಮರ್ಪಕವಾಗಿ ನೀರು ಸರಬರಾಜು ಮಾಡುವವರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ  ನಾಗರಾಜ್, ಕೃಷ್ಣಪ್ಪ, ಅಮೀರ್ ಜಾನ್, ರಂಗಧಾಮಯ್ಯ, ಸಂಪತ್‌ಕುಮಾರ್, ಸರಸ್ವತಮ್ಮ, ಭಾಗ್ಯಲಕ್ಷ್ಮಿ, ಮಮತ, ಕಾಂತಮ್ಮ, ಗೀತಾ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.