ADVERTISEMENT

ನೆಲ ಕಚ್ಚಿದ ರಾಗಿ ಬೆಳೆ: ಸಂಕಷ್ಟದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 7:05 IST
Last Updated 2 ಡಿಸೆಂಬರ್ 2017, 7:05 IST
ತಾಲ್ಲೂಕಿನ ಲಕ್ಕೂರು ಹೋಬಳಿಯ ಜಯಮಂಗಲ ಗ್ರಾಮದ ರೈತ ನಂಜುಂಡಪ್ಪ ತಮ್ಮ ಹೊಲದಲ್ಲಿ ಬೆಳೆದಿರುವ ರಾಗಿ ಬೆಳೆ ಕಟಾವಿಗೆ ಬಂದಿರುವುದು
ತಾಲ್ಲೂಕಿನ ಲಕ್ಕೂರು ಹೋಬಳಿಯ ಜಯಮಂಗಲ ಗ್ರಾಮದ ರೈತ ನಂಜುಂಡಪ್ಪ ತಮ್ಮ ಹೊಲದಲ್ಲಿ ಬೆಳೆದಿರುವ ರಾಗಿ ಬೆಳೆ ಕಟಾವಿಗೆ ಬಂದಿರುವುದು   

ಮಾಲೂರು: ಎರಡ್ಮೂರು ದಿನಗಳಿಂದ ಒಖಿ ಚಂಡಮಾರುತದಿಂದ ಸುರಿಯುತ್ತಿರುವ ಜಡಿ ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ರಾಗಿ ಬೆಳೆ ನೆಲ ಕಚ್ಚಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲ್ಲೂಕಿನ ಕಸಬಾ ಲಕ್ಕೂರು, ಟೇಕಲ್ ಮತ್ತು ಮಾಸ್ತಿ ಹೋಬಳಿಗಳಲ್ಲಿ ಈ ವರ್ಷ ರಾಗಿ ಬೆಳೆ ಅತ್ಯುತ್ತಮವಾಗಿತ್ತು. ಬಂಪರ್ ಫಸಲಿನ ರೈತರ ಕನಸನ್ನು ಮಳೆ ಹಾಳು ಮಾಡಿದೆ.

ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ ರಾಗಿ 9,600, ಭತ್ತ 30, ಮೇವಿನ ಜೋಳ 80, ತೃಣ ಧಾನ್ಯ 5, ತೊಗರಿ 230, ಅಲಸಂದೆ 165, ಅವರೆ 955, ನೆಲಗಡಲೆ 200, ಎಳ್ಳು 260, ಹುಚ್ಚೆಳ್ಳು 10, ಸಾಸುವೆ 35, ಹರಳು 2 ಹೆಕ್ಟೇರ್ ಸೇರಿದಂತೆ 11,572 ಹೆಕ್ಟೇರ್ ಭೂ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ.

ADVERTISEMENT

ತಾಲ್ಲೂಕಿನಾದ್ಯಂತ ರೈತರು ಬಿತ್ತನೆ ಮಾಡಿರುವ ರಾಗಿ ಬೆಳೆಯಲ್ಲಿ ಕೆಲವು ಭಾಗಗಳಲ್ಲಿ ಮಾತ್ರ ಕಟಾವು ಮಾಡಲಾಗಿದೆ. ಉಳಿದ ಭಾಗಗಳಲ್ಲಿ ರಾಗಿ ಬೆಳೆ ಕಟಾವಿಗೆ ಸಿದ್ಧಗೊಂಡಿತ್ತು. ಆದರೆ ಸುರಿಯುತ್ತಿರುವ ಮಳೆಯು ರೈತರ ಆಸೆಗೆ ತಣ್ಣಿರು ಎರಚಿದೆ.

‘ಸುರಿಯುತ್ತಿರುವ ಜಡಿ ಮಳೆಯಿಂದಾಗಿ ಕಟಾವಿಗೆ ಬಂದು ನಿಂತಿದ್ದ ರಾಗಿ ಬೆಳೆ ನೆಲ ಕಚ್ಚಿದೆ. ತಾಲ್ಲೂಕಿನಲ್ಲಿ ಶೇ 30ರಷ್ಟು ಕಟಾವು ಕಾರ್ಯ ನಡೆದಿದ್ದು, ಈಗೆ ಮುಂದುವರೆದಲ್ಲಿ ಕಟಾವು ಮಾಡಲಾಗಿದ್ದ ರಾಗಿ ತೆನೆಗಳು ಸಹ ಬೂಸ್ಟ್ ಇಡಿದು ಕಪ್ಪು ಬಣ್ಣಕ್ಕೆ ತಿರುಗುವ ಸಾಧ್ಯತೆ ಇದೆ’ ಎಂದು ಕೃಷಿ ಅಧಿಕಾರಿ ಮುನಿರಾಜು ಹೇಳುತ್ತಾರೆ.

‘ಜಡಿ ಮಳೆಯಿಂದ ಜಮೀನಿನಲ್ಲಿ ಬೆಳೆದಿದ್ದ ರಾಗಿ ಬೆಳೆ ಸಂರ್ಪೂಣವಾಗಿ ನೆಲಕಚ್ಚಿದೆ. ಸರ್ಕಾರ ರಾಗಿ ಬೆಳೆಗೆ ಪರಿಹಾರ ನೀಡಬೇಕು’ ಎಂದು ಜಯಮಂಗಲ ಗ್ರಾಮದ ರೈತ ನಂಜುಂಡಪ್ಪ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.