ಕೋಲಾರ: ‘ಮಕ್ಕಳಿಗೆ ಅಸಕ್ತಿಯಿರುವ ವಿಷಯಗಳಲ್ಲಿ ತೊಡಗಿಸಿಕೊಳ್ಳಲು ಪೋಷಕರು ಸಹಕಾರ ನೀಡಿದಾಗ ಜೀವನದ ಗುರಿ ಮುಟ್ಟಲು ಸಾಧ್ಯ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೆ.ಬಾಲಕೃಷ್ಣ ಅಭಿಪ್ರಾಯಪಟ್ಟರು.
ನಗರದ ಹೊರವಲಯದ ಆದಿಮ ಸಾಂಸ್ಕೃತಿ ಕೇಂದ್ರದಲ್ಲಿ ಭಾನುವಾರ ಆರಂಭವಾದ ಚುಕ್ಕಿ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಶಿಕ್ಷಣದಲ್ಲಿ ಮುಂದುವರೆಯುತ್ತಿರುವ ಮತ್ತು ಹಿಂದುಳಿದಿರುವ ವಿದ್ಯಾರ್ಥಿಗಳು ಎಂಬ ಭೇದಭಾವ ಇರಬಾರದು. ಶಿಕ್ಷಕರು ಎಲ್ಲ ವಿದ್ಯಾರ್ಥಿಗಳನ್ನು ಸಮಾನವಾಗಿ ನೋಡಬೇಕು’ಎಂದು ಹೇಳಿದರು.
‘ಶಿಕ್ಷಕರನ್ನು, ಪೋಷಕರನ್ನು ಪ್ರಶ್ನೆ ಮಾಡುವ ಮಟ್ಟಕ್ಕೆ ಮಕ್ಕಳು ಬೆಳೆದಿದ್ದಾರೆ. ಅವರ ಪ್ರಶ್ನೆಗೆ ಸಮರ್ಪಕವಾಗಿ ಉತ್ತರ ಸಿಗದಿದ್ದರೆ ಯೋಚನೆಗೆ ಒಳಗಾಗುತ್ತಾರೆ. ಅದು ಮಕ್ಕಳ ಬೆಳವಣಿಗೆಯ ಮೇಲೆ ಯಾವ ರೀತಿಯಾದರೂ ಪರಿಣಾಮ ಬೀರಬಹುದು’ ಎಂದು ಎಚ್ಚರಿಸಿದರು.
ಮಕ್ಕಳು ಪರೀಕ್ಷೆ ಮುಗಿದ ಮೇಲೆ ಮನೆಯಲ್ಲಿದ್ದರೆ ಹೇಳಿದ ಮಾತು ಕೇಳುವುದಿಲ್ಲ. ಕೇವಲ ಶಾಲೆ, ಓದು, ಫಲಿತಾಂಶ ಇಷ್ಟಕ್ಕೆ ಸಮೀತಗೊಳಿಸುತ್ತದೆ. . ಇದರಿಂದಾಗಿ ಅವರು ಖಿನ್ನತೆಗೂ ಸಹ ಒಳಗಾಗಬಹುದು. ಇದರಿಂದಾಗಿ ಅವರನ್ನು ಬೇಸಿಗೆ ಶಿಬಿರಗಳಲ್ಲಿ ಸೇರಿಸುವುದರಿಂದ ಜ್ಞಾನವೃದ್ಧಿಯ ಜತೆಗೆ ಕೌಶಲತೆಯ ಬಗ್ಗೆಯೂ ಅರಿವು ಮೂಡಿಸಲಾಗುವುದು ಎಂದರು.
‘ಮಕ್ಕಳು ಓದಲು ಅಗತ್ಯವಿರುವ ಸೌಕರ್ಯ ಕಲ್ಪಿಸಿದಾಗಲೂ ಫಲಿತಾಂಶ ಯಾಕೆ ಕಡಿಮೆಯಾಗಿದೆ ಎಂದು ಕೇಳಬಾರದು. ಅದಕ್ಕಿಂತ ಮೊದಲು ಅವರು ಓದುತ್ತಿರುವ ಶಾಲೆಯಲ್ಲಿ ಮಕ್ಕಳು ಕಲಿಯಲು ಪೂರಕವಾದ ವಾತಾರಣ ಇದಿಯೇ, ಶಿಕ್ಷಕರು ಇದ್ದಾರೆ ಎಂಬುದರ ಬಗ್ಗೆಯೂ ಪೋಷಕರು ಗಮನ ಹರಿಸಬೇಕು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.