ಮುಳಬಾಗಲು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿಪಿಐ ಹಾಗೂ ಕಿಸಾನ್ ಸಭಾ ಕಾರ್ಯಕರ್ತರು ಬುಧವಾರ ಪಟ್ಟಣದ ಕೆಇಬಿ ವೃತ್ತದಲ್ಲಿ ಮಾನವ ಸರಪಳಿ ನಡೆಸಿ ಪ್ರತಿಭಟಿಸಿದರು.
ರಾಜ್ಯ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ ಎಂ.ಗೋಪಾಲ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ತಾಲ್ಲೂಕಿನಲ್ಲಿ ವಿದ್ಯುತ್ ಕಡಿತ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.
ಸಾವಿರಾರು ಎಕರೆ ಪ್ರದೇಶದಲ್ಲಿ ನೆಲಗಡಲೆ ಬೆಳೆ ಬೆಳೆದಿದ್ದು ಅದಕ್ಕೆ ತುಕ್ಕು ರೋಗ ಹಿಡಿದಿರುವುದರಿಂದ ಬೆಳೆ ನಷ್ಟವಾಗಿದೆ. ರೈತ ಸಮುದಾಯ ಬ್ಯಾಂಕ್ ಹಾಗೂ ಇತರೆಡೆಯಿಂದ ಪಡೆದ ಸಾಲ ತೀರಿಸಲಾಗದೆ ಕಂಗಾಲಾಗಿದ್ದಾರೆ. ಕೂಡಲೇ ಪರಿಹಾರ ನೀಡಬೇಕು. ಜಿಲ್ಲೆಗೆ ಅಗತ್ಯವುಳ್ಳ ವಿದ್ಯುತ್ ವಿತರಿಸಬೇಕು ಎಂದು ಆಗ್ರಹಿಸಿದರು.
ನಂತರ ಉಪ ತಹಶೀಲ್ದಾರ್ ಎಂ.ಕೆ.ರಮೇಶ್ ಮತ್ತು ಬೆಸ್ಕಾಂ ಅಧಿಕಾರಿ ಸತೀಶ್ಗೆ ಮನವಿ ಪತ್ರ ಸಲ್ಲಿಸಿದರು. ಕೋಲಾರ ಸಿಪಿಐ ಕಾರ್ಯದರ್ಶಿ ಸಂಗಸಂದ್ರ ರಾಮಚಂದ್ರ, ತಾಲ್ಲೂಕು ಕಾರ್ಯದರ್ಶಿ ರಾಧಾಕೃಷ್ಣ, ತಾಲ್ಲೂಕು ಅಂಗನ ವಾಡಿ ಕಾರ್ಯಕರ್ತೆಯರ ಅಧ್ಯಕ್ಷೆ ಸಕ್ಕುಭಾಯಿ, ಎಸ್ಎಫ್ಐನ ಗುಜ್ಜಮಾರಂಡಹಳ್ಳಿ ಮುನಿರಾಜು ಮುಂತಾದವರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.