ADVERTISEMENT

ಶ್ರೀನಿವಾಸಪುರ: ಕಾಂಗ್ರೆಸ್-ಜೆಡಿಎಸ್ ಪ್ರಚಾರ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 9:00 IST
Last Updated 9 ಏಪ್ರಿಲ್ 2013, 9:00 IST

ಶ್ರೀನಿವಾಸಪುರ: ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿ ಜೆಡಿಎಸ್‌ನಿಂದ ಮಾತ್ರ ಸಾಧ್ಯ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಗಡಿಗ್ರಾಮ ಸೋಮಯಾಜಲಹಳ್ಳಿಯಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸುವುದಾಗಿ ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಹೇಳುತ್ತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಇದೆ. ರಾಜ್ಯ ಸರ್ಕಾರದ ಮೇಲೆ ಪ್ರಭಾವ ಬೀರಿ ಏಕೆ ಒದಗಿಸಬಾರದು ಎಂದು ಪ್ರಶ್ನಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಿ.ಸೋಮಶೇಖರ್, ತೂಪಲ್ಲಿ ಆರ್.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಂಡಪಲ್ಲಿ ಕೃಷ್ಣಾರೆಡ್ಡಿ, ಮಾಜಿ ಉಪಾಧ್ಯಕ್ಷ ಕೊರ್ರಹಳ್ಳಿ ಆಂಜಿನಪ್ಪ, ಮುಖಂಡರಾದ ಮಂಜುನಾಥ್‌ಸಿಂಗ್, ಬಾಬು, ಬಜಾಜ್ ನಾರಾಯಣಸ್ವಾಮಿ, ವೇಣು, ಶಿವಾರೆಡ್ಡಿ ಸಭೆಯಲ್ಲಿ ಉಪಸ್ಥಿತರಿದ್ದರು.

ಸೇರ್ಪಡೆ: ತಾಲ್ಲೂಕಿನ ನೆಲವಂಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಚಿಕ್ಕರಂಗೇಪಲ್ಲಿ, ತಮ್ಮರೆಡ್ಡಿಗಾರಿಪಲ್ಲಿ, ತೂಪಲ್ಲಿ ಗ್ರಾಮಗಳ ಕೆಲವು ಕಾಂಗ್ರೆಸ್ ಬೆಂಬಲಿಗರು ಜಿ.ಕೆ.ವೆಂಕಟಶಿವಾರೆಡ್ಡಿ ನೇತೃತ್ವದಲ್ಲಿ ಜೆಡಿಎಸ್ ಸೇರಿದರು.

ಬರಡು ಭೂಮಿಗೆ ನೀರು-ಕಾಂಗ್ರೆಸ್
ಶ್ರೀನಿವಾಸಪುರ
: ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನದಿ ನೀರು ಹರಿದು ಹಸಿರು ಮೂಡಲು ಮತದಾರರು ಕಾಂಗ್ರೆಸ್‌ಗೆ ಮತ ನೀಡಿ ಆಶೀರ್ವಾದ ಮಾಡಬೇಕು ಎಂದು ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಮನವಿ ಮಾಡಿದರು.

ತಾಲ್ಲೂಕಿನ ತೂಪಲ್ಲಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಈ ಜಿಲ್ಲೆಗಳಲ್ಲಿ ಕೆರೆಗಳು ಹೂಳು ತುಂಬಿ ಹಾಳಾಗಿವೆ. ಅಂತರ್ಜಲ ಮುಗಿದಿದೆ. ಫ್ಲೋರೈಡ್ ಮಿಶ್ರಿತ ನೀರು ಸೇವನೆಯಿಂದ ಜನರ ಆರೋಗ್ಯ ಕೆಡುತ್ತಿದೆ. ವಿದ್ಯುತ್ ಅಭಾವದಿಂದ ಲಭ್ಯವಿರುವ ಅಲ್ಪ ಪ್ರಮಾಣದ ನೀರನ್ನೂ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜನ ಗುಳೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಶ್ವತ ನೀರಾವರಿ ವ್ಯವಸ್ಥೆ ಮಾತ್ರ ಇಲ್ಲಿನ ಜನರ ಜೀವ ಉಳಿಸಬಲ್ಲದು. ಅದನ್ನು ತರಲು ಭಗೀರಥ ಪ್ರಯತ್ನ ಬೇಕಾಗುತ್ತದೆ ಎಂದು ಹೇಳಿದರು.

ಬಾಯಾರಿದ ಜನರಿಗೆ ನೀರು ತಂದುಕೊಟ್ಟು ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಬಯಸಿದ್ದೇನೆ. ಕ್ಷೇತ್ರದ ಜನತೆ ಶಾಂತಿ ಮತ್ತು ನೆಮ್ಮದಿಯಿಂದ ಕೂಡಿದ ಜೀವನ ನಡೆಸಬೇಕು ಎಂಬುದು ನನ್ನ ಬಯಕೆ. ಸಣ್ಣಪುಟ್ಟದ್ದಕ್ಕೆ ಜಗಳ ಮಾಡಿಕೊಂಡು ಪೊಲೀಸ್ ಠಾಣೆ, ನ್ಯಾಯಾಲಯದ ಮೆಟ್ಟಿಲೇರದೆ ಒಂದಾಗಿ ಬದುಕಬೇಕು. ಅಧಿಕಾರಕ್ಕಾಗಿ ಚುನಾವಣೆಗೆ ನಿಂತಿಲ್ಲ. ಬರಡು ನೆಲದಲ್ಲಿ ಹಸಿರು ಮೂಡಿಸಲು ಅಗತ್ಯವಾದ ಒಂದು ಅವಕಾಶಕ್ಕಾಗಿ ನಿಮ್ಮ ಬಳಿಗೆ ಬಂದಿದ್ದೇನೆ. ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಮುಖಂಡ ಕೆ.ಕೆ.ಮಂಜು, ಕೃಷ್ಣಾರೆಡ್ಡಿ, ಬಿ.ಸಿ.ಅರವಿಂದ್, ಪಿ.ವಾಸು ಉಪಸ್ಥಿತರಿದ್ದರು. ಈ ಸಂದರ್ಭ ಬೇರೆ ಬೇರೆ ಗ್ರಾಮಗಳಿಗೆ ಸೇರಿದ ಮುನಿರೆಡ್ಡಿ, ಟಿ.ವಿ.ಶ್ರೀನಿವಾಸರೆಡ್ಡಿ, ರೆಡ್ಡಪ್ಪ, ಲಚ್ಚಾರೆಡ್ಡಿ, ಗಂಗಿರೆಡ್ಡಿ, ಸತೀಶ್, ಟಿ.ಎನ್.ರೆಡ್ಡೆಪ್ಪ, ಕೃಷ್ಣಾರೆಡ್ಡಿ, ಸುರೇಶ, ರಾಮಕಷ್ಣ, ಚಿನ್ನಪರೆಡ್ಡಿ, ಮಂಜು, ನವೀನ್, ಶಿವಾರೆಡ್ಡಿ, ಪಾರ್ವತಮ್ಮ, ಭಾರತಮ್ಮ, ರೆಡ್ಡೆಪ್ಪರೆಡ್ಡಿ, ಶಿವಾರೆಡ್ಡಿ, ಎನ್.ಆರ್.ಬಾಬು, ಸೋಮಶೇಖರ್, ಶ್ರೀನಿವಾಸಲು, ರವಣಪ್ಪ, ಜಿ.ಶಂಕರಪ್ಪ, ಗಂಗಲಪ್ಪ, ವೆಂಕಟಶಾಮಿ, ಎನ್,ಆರ್.ಸ್ವಾಮಿ, ಮುನಿಸ್ವಾಮಿ, ವೆಂಕಟರವಣಪ್ಪ, ನಾರಾಯಣಸ್ವಾಮಿ, ನಾಗೇಶ್, ವೆಂಕಟೇಶಪ್ಪ, ಕೃಷ್ಣಪ್ಪ, ನಾರಾಯಣಪ್ಪ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.