ADVERTISEMENT

ಸಬ್‌ಇನ್ಸ್‌ಪೆಕ್ಟರ್ ವಿರುದ್ಧ ಧರಣಿ

ದೂರು ದಾಖಲಿಸದೆ ನಿರ್ಲಕ್ಷ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 4:50 IST
Last Updated 3 ಜುಲೈ 2013, 4:50 IST

ಕೋಲಾರ: ದಲಿತ ಸಮುದಾಯದವರೊಬ್ಬರ ದೂರನ್ನು ಸ್ವೀಕರಿಸದೆ ಅವಮಾನಿಸಿದ ಪಿಎಸ್‌ಐ ಕೆ.ಕೆ.ರಘು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ವೇಮಗಲ್ ಗ್ರಾಮಸ್ಥರು ವೇಮಗಲ್ ಠಾಣೆ ಆವರಣದಲ್ಲಿ ಸೋಮವಾರ ಧರಣಿ ನಡೆಸಿದರು.

ದಲಿತ ಸಮುದಾಯದ ಕೃಷ್ಣಪ್ಪ ಎಂಬುವರ ಜಮೀನನ್ನು ಲಪಟಾಯಿಸಲು ಹಲವರು ಸಂಚು ರೂಪಿಸಿ ಹಲ್ಲೆ ನಡೆಸಿದ್ದಾರೆ. ಆ ಬಗ್ಗೆ ದೂರು ನೀಡಲು ಠಾಣೆಗೆ ಬಂದ ಕೃಷ್ಣಪ್ಪನ ಜೊತೆಗೆ ಪಿಎಸೈ ರಘು ಅಮಾನವೀಯವಾಗಿ ವರ್ತಿಸಿ, ಅವರ ವಿರುದ್ಧವೇ ದೂರು ದಾಖಲಿಸಿ ದಲಿತ ವಿರೋಧಿ ಧೋರಣೆಯನ್ನು ತೋರಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದರು.

ಕುರಿ, ಮೇಕೆ ಹಾಗೂ ಮನೆ ಬಳಕೆಯ ವಸ್ತುಗಳನ್ನು ಠಾಣೆ ಮುಂದೆ ಪ್ರದರ್ಶಿಸಿ ಮೂರು  ಗಂಟೆ ಕಾಲ ಧರಣಿ ನಡೆಸಿದ ಪ್ರತಿಭಟನಾನಿರತರು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬರಬೇಕು ಎಂದು ಪಟ್ಟು ಹಿಡಿದರು.

ಡಿವೈಎಸ್‌ಪಿ ಶ್ರೀಹರಿ ಬರಗೂರು ಸ್ಥಳಕ್ಕೆ ಬಂದು ಧರಣಿನಿರತರ ಅಹವಾಲುಗಳನ್ನು ಆಲಿಸಿದರು. ಕೃಷ್ಣಪ್ಪನ ಮೇಲೆ ದೌರ್ಜನ್ಯ ಎಸಗಿದ ಆರೋಪಿಗಳ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ ನಂತರ ಧರಣಿಯನ್ನು ಕೊನೆಗೊಳಿಸಲಾಯಿತು.

ಮುಖಂಡರಾದ ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ವೆಂಕಟೇಶ್,  ಮುನಿಆಂಜಿನಯ್ಯ, ಕೃಷ್ಣ, ವೆಂಕಟೇಶ್, ಮುನಿಸ್ವಾಮಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.