ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಸುಗಟೂರು ಗ್ರಾಮದ ಸಬರಮತಿ ಸಂಯುಕ್ತ ಪ್ರೌಢ ಶಾಲೆ ಆವರಣದಲ್ಲಿ ಹಕ್ಕಿಯೊಂದು ಗಟ್ಟಿಯಾಗಿ ಚೀರುವ ಧ್ವನಿ ಕಿವಿಗೆ ಬೀಳುತ್ತಲೇ ಮೈದಾನದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿಗಳು ಆ ಕಡೆಗೆ ಓಡಿದರು.
ನಾಲ್ಕೈದು ಕಾಗೆಗಳು ಆ ಹಕ್ಕಿಯನ್ನು ಅಟ್ಟಾಡಿಸಿಕೊಂಡು ಕುಕ್ಕುತ್ತಿದ್ದವು. ನೋವಿನಿಂದ ನರಳುತ್ತ, ನೆಲದಲ್ಲಿ ಹೊರಳಾಡುತ್ತ ಕರ್ಕಶವಾಗಿ ಕಿರುಚುತ್ತಿದ್ದ ಹಕ್ಕಿಯನ್ನು ರಕ್ಷಿಸಲು ವಿದ್ಯಾರ್ಥಿಗಳು ಕಾಗೆಗಳನ್ನು ಓಡಿಸಿದರು.
ಆದರೆ ಹಕ್ಕಿ ಮಾತ್ರ ಅವರ ಕೈಗೆ ಸಿಕ್ಕಲಿಲ್ಲ. ಹಾರಿ ಹೋಗಿ ಶಾಲಾ ಕಚೇರಿಯ ಅಲ್ಮೇರಾದ ಸಂದಿಯಲ್ಲಿ ತೂರಿಕೊಂಡಿತು. ಹುಡುಗರು ಅದನ್ನು ಹಿಂಬಾಲಿಸಿ ಹೋಗಿ, ಸಂದಿಗೆ ಕೈ ಹಾಕಿ ಹಿಡಿಯಲು ಹೋದಾಗ ಬಾಯನ್ನು ಅಗಲಿಸಿ ವಿಚಿತ್ರವಾಗಿ ಕಿರುಚತೊಡಗಿತು. ಒಂದಿಬ್ಬರು ಹುಡುಗರ ಬೆರಳನ್ನು ಕೊಕ್ಕಿನಿಂದ ಕಚ್ಚಿದ್ದೂ ಆಯಿತು.
ಆದರೂ ಬಿಡದ ಹುಡುಗರು ಹಕ್ಕಿಯನ್ನು ಹುಷಾರಾಗಿ ಹಿಡಿದು ದೈಹಿಕ ಶಿಕ್ಷಣ ಶಿಕ್ಷಕ ರೆಡ್ಡಪ್ಪ ಅವರ ಬಳಿ ತಂದರು. ಅರೆ! ಅದು ಕೋಗಿಲೆ ಮರಿ. ವಿಶೇಷವಾಗಿ ಸುಂದರವಾದ ಚುಕ್ಕೆ ಕೋಗಿಲೆ. ಸಾಮಾನ್ಯವಾಗಿ ಕೋಗಿಲೆ ಬಣ್ಣ ಕಪ್ಪು. ಆದರೆ ಈ ಕಡೆ ಚುಕ್ಕೆ ಹಾಗೂ ಬೂದು ಬಣ್ಣದ ಕೋಗಿಲೆಗಳೂ ಇವೆ. ಕಾಗೆಗಳು ಕೊಕ್ಕಿನಿಂದ ಕುಕ್ಕಿದ್ದ ಪರಿಣಾಮವಾಗಿ ಮರಿ ಕೋಗಿಲೆಗೆ ಮೈಯೆಲ್ಲಾ ಗಾಯಗಳಾಗಿದ್ದವು. ಕೆಲವು ಕಡೆ ರಕ್ತ ಜಿನುಗುತ್ತಿತ್ತು.
ಅದಕ್ಕೆ ಚಿಕಿತ್ಸೆ ನೀಡಬೇಕು ಎಂದುಕೊಂಡಾಗ ನೆನಪಾದದ್ದು ಗಾಯಗೊಂಡ ಪ್ರಾಣಿ ಪಕ್ಷಿಗಳಿಗೆ ಚಿಕಿತ್ಸೆ ನೀಡುವುದಲ್ಲಿ ಹೆಸರಾಗಿರುವ ಕಶೆಟ್ಟಿಪಲ್ಲಿ ಗ್ರಾಮದ ಸರ್ಕಾರಿ ಉನ್ನತೀಕೃತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಸಾಹಿತಿ ಸ.ರಘುನಾಥ. ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದಾಗ, ಚಿಕಿತ್ಸೆ ಹಾಗೂ ಪಾಲನೆಯ ಮಾಹಿತಿ ನೀಡಿದರು.
ಅದರಂತೆ ಔಷಧಿ ಅಂಗಡಿಯಿಂದ ಮುಲಾಮು ತರಿಸಿ ಗಾಯಗಳಿಗೆ ಹಚ್ಚಲಾಯಿತು. ವಿದ್ಯಾರ್ಥಿಗಳು ಹುಳು ಹುಪ್ಪಟೆ ಹಿಡಿದು ತಂದು ಅದರ ಬಾಯಿಗಿಟ್ಟರೂ ಭಯದಿಂದ ಕಂಪಿಸುತ್ತಿದ್ದ ಹಕ್ಕಿ ತಿನ್ನುವ ಧೈರ್ಯ ಮಾಡಲಿಲ್ಲ. ಆದರೆ ಕೆಲವು ಗಂಟೆಗಳ ಕಾಲ ಸುಧಾರಿಸಿಕೊಂಡ ಮೇಲೆ ಹಸಿವಾಯಿತೋ ಏನೋ ಆಹಾರವನ್ನು ಸೇವಿಸತೊಡಗಿತು.
ಅಷ್ಟರಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಶ್ರೀನಿವಾಸರೆಡ್ಡಿ ವಿದ್ಯಾರ್ಥಿಗಳ ನೆರವಿನಿಂದ ರಟ್ಟಿನ ಕಾಟನ್ ಒಂದಕ್ಕೆ ಅಲ್ಲಲ್ಲಿ ರಂದ್ರ ಮಾಡಿ, ಗಾಯಗೊಂಡಿದ್ದ ಕೋಗಿಲೆ ಮರಿಗೆ ಗೂಡನ್ನು ತಯಾರಿಸಿ ತಂದರು. ಗೂಡಿನಲ್ಲಿರಿಸಿ ನಾಲ್ಕು ದಿನ ಎಚ್ಚರಿಕೆಯಿಂದ ನೋಡಿಕೊಂಡ ಮೇಲೆ ಅದು ಚೇತರಿಸಿಕೊಂಡಿತು. ಅಷ್ಟರಲ್ಲಿ ವಿದ್ಯಾರ್ಥಿಗಳು ಹಾಗೂ ಅದರ ನಡುವೆ ಸ್ನೇಹ ಬೆಳೆದಿತ್ತು. ಹೆದರಿಕೆ ಹೋಗಿ ಧೈರ್ಯ ಬಂದಿತ್ತು. ಗೂಡಿನಿಂದ ಹೊರಬಂದು ಕಚೇರಿಯಲ್ಲೆಲ್ಲಾ ಹಾರಾಡತೊಡಗಿತು.
ಇನ್ನು ಸ್ವತಂತ್ರವಾಗಿ ಹಾರಬಲ್ಲದು ಎಂದು ಮನವರಿಕೆ ಆದ ಮೇಲೆ ಅದನ್ನು ವಿದ್ಯಾರ್ಥಿಗಳ ಸಮಕ್ಷಮ ಹಾರಿಬಿಡಲಾಯಿತು. ಕೈ ಜಾರಿದ್ದೇ ತಡ ಒಮ್ಮೆ ಶಬ್ದ ಮಾಡಿದ ಮರಿ ಕೋಗಿಲೆ ಹಾರುತ್ತ ದೂರ ಸಾಗಿತು. ಮಕ್ಕಳು ಚಪ್ಪಾಳೆ ತಟ್ಟಿ ಸಂತೋಷ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.