ADVERTISEMENT

ಕಿಡಿಗೇಡಿಗಳ ಗಡಿಪಾರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 10:04 IST
Last Updated 6 ಜನವರಿ 2018, 10:04 IST

ಮುಳಬಾಗಿಲು: ‘ಕೋರೆಗಾಂವ್ ವಿಜಯೋತ್ಸವದಲ್ಲಿ ಗಲಭೆ ಎಬ್ಬಿಸಿ ದಲಿತರ ಮೇಲೆ ದೌರ್ಜನ್ಯ ಮಾಡಿರುವ ಕಿಡಿಗೇಡಿಗಳನ್ನು ಗಡಿಪರು ಮಾಡಿ, ದಲಿತರಿಗೆ ಸೂಕ್ತ ರಕ್ಷಣೆ ನೀಡಬೇಕು’ ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸಂಯೋಜಕ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

‘ಭೀಮಾ– ಕೋರೆಗಾಂವ್‍ ಯುದ್ಧದಲ್ಲಿ ದಲಿತರನ್ನು ಒಳಗೊಂಡ ಬ್ರಿಟಿಷ್‌ ಸೇನೆಯು ಮೇಲ್ಜಾತಿಯವರನ್ನು ಸೋಲಿಸಿದ ಸ್ಮರಣಾರ್ಥ ಆಯೋಜಿಸಿದ್ದ 200ನೇ ವಿಜಯೋತ್ವದಲ್ಲಿ ದಲಿತರ ಮೇಲೆ ದೌರ್ಜನ್ಯ ಮಾಡಿರುವುದು ಖಂಡನೀಯ’ ಎಂದು ದಲಿತ ಸಂಘರ್ಷ ಸಮಿತಿ ಸಂಯೋಜಕ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಸಂಗಸಂದ್ರ ವಿಜಯ್‍ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

‘ಭಾರತದಲ್ಲಿ ಬ್ರಿಟಿಷ್‌ ಆಳ್ವಿಕೆಗಿಂತಲೂ ಮೊದಲಿನಿಂದಲೂ ದಲಿತರ ಮೇಲಿನ ದೌರ್ಜನ್ಯ, ಕಿರುಕುಳ ಇವೆಲ್ಲವೂ ಸಹ ಶತಮಾನಗಳು ಕಳೆದರೂ ಸಹ ಜಾರಿಯಲ್ಲಿರುವುದು ಅಮಾನವೀಯ ಸಂಗತಿಯಾಗಿದೆ’ ಎಂದರು.

ADVERTISEMENT

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ರಚನೆಗೊಂಡಿದ್ದರೂ ಸಹ ಸಂವಿಧಾನಕ್ಕೆ ಕೆಲವರು ಮಾನ್ಯತೆ ನೀಡದೆ ಇಂದಿಗೂ ಸರ್ವಾಧಿಕಾರನ್ನು ನಡೆಸುತ್ತಿದ್ದಾರೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ದಲಿತ ಸಮುದಾಯದ ಜನಾಂಗ ದೇಶಕ್ಕಾಗಿ ನೀಡಿದ ಕೊಡುಗೆಯ ಇತಿಹಾಸ ಪುಟಗಳನ್ನು ತಿರುಚುವ ಹುನ್ನಾರ ನಡೆಯುತ್ತಿದೆ. ಅಲ್ಲದೆ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಗೊಂಡ ಸಂವಿಧಾನವನ್ನು ಬದಲಿಸಬೇಕು ಎಂಬ ಹೇಳಿಕೆ ನೀಡಿದವರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು.

‘ಕೋರೆಗಾಂವ್ ವಿಜಯೋತ್ಸವ ಗಲಭೆಯಲ್ಲಿ ಮೃತಪಟ್ಟಿರುವ ದಲಿತ ಯುವಕನ ಕುಟುಂಬಕ್ಕೆ ಸೂಕ್ತವಾದ ನ್ಯಾಯ ಒದಗಿಸಿ ಕೊಡಬೇಕು ಹಾಗೂ ಹದಗೆಟ್ಟಿರುವ ಕಾನೂನು ವ್ಯವಸ್ಥೆಯನ್ನು ಸರಿಪಡಿಸಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಜಾತಿ ಸಂರ್ಘಕ್ಕೆ ಪ್ರಚೋದನೆ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ ಸಂಯೋಜಕ ಸಂಘಟನೆ ಜಿಲ್ಲಾ ಸಂಯೋಜಕ ತಾತಿಕಲ್ಲು ರಾಮಚಂದ್ರ, ತಾಲ್ಲೂಕು ಸಹ ಸಂಚಾಲಕ ಕೆರಸಮಂಗಲ ಚಿಕ್ಕರೆಡ್ಡೆಪ್ಪ, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಕಪ್ಪಲಮಡಗು ಶಂಕರ್, ಕೆರಸಮಂಗಲ ಅಮರಪ್ಪ, ಪಾಯಸ್ತನಹಳ್ಳಿ ಜನಾರ್ದನ್, ಮಾದೇನಹಳ್ಳಿ ಕೇಶವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.