ಕೆಜಿಎಫ್: ವರ್ಗಾವಣೆ ಕೇಳಿದ ಅಂಗನವಾಡಿ ಕಾರ್ಯಕರ್ತೆ ಮೇಲೆ ಅಶ್ಲೀಲವಾಗಿ ವರ್ತಿಸಿದ ಆರೋಪದ ಮೇರೆಗೆ ಸಿಡಿಪಿಒ ಮಹೇಶ್ ಬಾಬು ವಿರುದ್ಧ ರಾಬರ್ಟಸನ್ಪೇಟೆ ಪೊಲೀಸರಿಗೆ ದೂರು ನೀಡಲಾಗಿದೆ.
ಸೂರಪಲ್ಲಿ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಗೋಣಮಾಕನಹಳ್ಳಿಗೆ ವರ್ಗಾವಣೆ ಬಯಸಿದ್ದರು. ಈ ಸಂಬಂಧವಾಗಿ ಜಿಲ್ಲಾ ಮಟ್ಟದ ಅಧಿಕಾರಿಗೆ ಅರ್ಜಿ ನೀಡಿದ್ದರು. ಅರ್ಜಿ ತಿರಸ್ಕಾರ ಗೊಂಡಿತ್ತು. ಈ ಸಂಬಂಧವಾಗಿ ವಿಚಾರಣೆ ನಡೆಸಲು ಸೋಮವಾರ ಕಚೇರಿಗೆ ಬಂದಿದ್ದ ಕಾರ್ಯಕರ್ತೆಗೆ ಸಿಡಿಪಿಒ ಬಿಳಿ ಹಾಳೆ ಮೇಲೆ ಅಶ್ಲೀಲವಾಗಿ ಬರೆದು ತೋರಿಸಿದರು ಎಂದು ದೂರಲಾಗಿದೆ.
ಇದರಿಂದ ಕುಪಿತಗೊಂಡ ಕಾರ್ಯಕರ್ತೆ ತಮ್ಮ ಸಂಬಂಧಿಗಳಿಗೆ ಮಾಹಿತಿ ನೀಡಿದರು. ಮಹಿಳೆಯ ಸಂಬಂಧಿಗಳು ಮತ್ತು ಕೆಲ ಸಂಘಟನೆಗಳ ಮುಖಂಡರು ಸಿಡಿಪಿಒ ಅವರನ್ನು ತರಾಟೆಗೆ ತೆಗೆದುಕೊಂಡರು. ಕೊಂಚ ಕಾಲ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದರು. ಸಿಡಿಪಿಒ ಅವರನ್ನು ಬಂಧಿಸುವಂತೆ ಒತ್ತಾಯಿಸಿದರು.
ತಾನು ಯಾವುದೇ ತಪ್ಪು ಮಾಡಿಲ್ಲ. ವಿನಾಕಾರಣ ತಪ್ಪು ದೂರನ್ನು ಹೊರೆಸಲಾಗುತ್ತಿದೆ ಎಂದು ಸಿಡಿಪಿಒ ಸಮಾಜಾಯಿಸಿ ನೀಡಲು ಯತ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.