ಕೋಲಾರ: ‘ಒಂಟೆ,ಗೋವು ಹತ್ಯೆ ಮಾಡುವುದು ಅಪರಾಧ. ಬಕ್ರೀದ್ ಹಬ್ಬಹಿನ್ನೆಲೆಯಲ್ಲಿಈ ಬಗ್ಗೆ ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡಿ ಜಾಗೃತಿ ಮೂಡಿಸಬೇಕು. ಮುಸ್ಲಿಂ ಸಮುದಾಯ ಮುಖಂಡರ ಸಭೆ ನಡೆಸಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾನೂನಿನ ಬಗ್ಗೆ ತಿಳಿಸಿಕೊಡಬೇಕು’ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ, ವಿವಿಧ ಇಲಾಖೆಯ ಅಧಿಕಾರಿಗಳಿಗೆ
ಸೂಚಿಸಿದರು.
ಒಂಟೆ, ಗೋವು ಹತ್ಯೆ, ಅಕ್ರಮ ಸಾಗಣೆ ತಡೆಗಟ್ಟಲು ಪಶುಪಾಲನಾ ಇಲಾಖೆ ಹಾಗೂ ಜಿಲ್ಲಾ ಪ್ರಾಣಿ ದಯಾ ಸಂಘದವರ ಜೊತೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಪ್ರತಿಯೊಬ್ಬರು ಕಾನೂನು, ನಿಯಮ ಪಾಲಿಸಬೇಕು. ನಿಯಮ ಉಲ್ಲಂಘನೆ ಮಾಡಿದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.
‘ಹಬ್ಬದ ಸಂದರ್ಭದಲ್ಲಿ ಹೊರರಾಜ್ಯಗಳಿಂದ ಮತ್ತು ಹೊರಜಿಲ್ಲೆಗಳಿಂದ ಒಂಟೆ, ಜಾನುವಾರುಗಳನ್ನು ಕಳ್ಳಸಾಗಣೆ ಮಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಚೆಕ್ಪೋಸ್ಟ್ಗಳಲ್ಲಿ ಕಡ್ಡಾಯವಾಗಿ ವಾಹನ ತಪಾಸಣೆ ನಡೆಸಬೇಕು. ಈ ವೇಳೆ ಸಂರಕ್ಷಿಸುವ ಗೋವುಗಳನ್ನು ಪಶುಪಾಲನಾ ಇಲಾಖೆಯ ಸಹಯೋಗದೊಂದಿಗೆ ಗೋಶಾಲೆಗೆ ಸೇರಿಸಬೇಕು’ ಎಂದು ಅವರು ನಿರ್ದೇಶನ
ನೀಡಿದರು.
ಜಿಲ್ಲೆಯ ಪ್ರಾಣಿ ಕಲ್ಯಾಣ ಮೇಲ್ವಿಚಾರಕರಾಗಿ ಡಾ.ವಿ.ರಘುರಾಮೇಗೌಡ ಅವರನ್ನು ನೇಮಿಸಲಾಯಿತು.
ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ಎನ್ ಜಗದೀಶ್ ಕುಮಾರ್, ಮುಖ್ಯ ಪಶುವೈದ್ಯಾಧಿಕಾರಿ ಡಾ.ಅಪ್ಜಲ್ ಪಾಷ, ಹಿರಿಯ ಪಶುವೈದ್ಯಾಧಿಕಾರಿ ಡಾ.ವಿಶ್ವನಾಥ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಘೋರ್ಪಡೆ,
ನಗರಸಭೆ ಅಧಿಕಾರಿ ಹಾಗೂ ಜಿಲ್ಲಾ ಪ್ರಾಣಿದಯಾ ಸಂಘದ ಸದಸ್ಯ ಶ್ರೀನಿವಾಸಚಾರಿ, ಡಾ.ಆಂಜನೇಯರೆಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.