ಬಂಗಾರಪೇಟೆ: ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಭಾನುವಾರ ತಾಲ್ಲೂಕಿನ ದೊಡ್ಡೋರು ಕರಪನಹಳ್ಳಿಯ ಖಾಲಿ ಕೆರೆಯಲ್ಲಿ ಸುರಕ್ಷಿತವಾಗಿ ಇಳಿದಿದೆ.
ಬೆಂಗಳೂರಿನ ಯಲಹಂಕದಿಂದ ಮಧ್ಯಾಹ್ನ ಮೂರು ಗಂಟೆಗೆ ಹಾರಿದ ಭಾರತೀಯ ವಾಯುಪಡೆಯ ಎರಡು ಹೆಲಿಕಾಪ್ಟರ್ ಚೆನ್ನೈನ ತಾಂಬರಂ ವಾಯುನೆಲೆಗೆ ಹೊರಟಿದ್ದವು.
ಮಾರ್ಗಮಧ್ಯೆ ಒಂದು ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ದೊಡ್ಡೋರು ಕರಪನಹಳ್ಳಿ ಮೇಲೆ ಕೆಲ ಹೊತ್ತು ಹಾರಾಟ ನಡೆಸಿ, ಕೊನೆಗೆ ಸಂಜೆ 4ಕ್ಕೆ ಖಾಲಿ ಕೆರೆಯಲ್ಲಿ ಸುರಕ್ಷಿತವಾಗಿ ಇಳಿದಿದೆ. ಮತ್ತೊಂದು ಹೆಲಿಕಾಪ್ಟರ್ ಚೆನ್ನೈನ ತಾಂಬರಂ ಕಡೆಗೆ ಹೊರಟು ಹೋಗಿದೆ.
ತುರ್ತು ಭೂಸ್ಪರ್ಶ ಮಾಡಿದ ಹೆಲಿಕಾಪ್ಟರ್ನಲ್ಲಿ ಇಬ್ಬರು ಪೈಲಟ್ ಮತ್ತು ಒಬ್ಬ ಗ್ರೌಂಡ್ ಸ್ಟಾಫ್ ಇದ್ದರು. ಬೆಂಗಳೂರಿನಿಂದ ಮತ್ತೊಂದು ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ತಂಡವೊಂದು ಸ್ಥಳಕ್ಕೆ ದೌಡಾಯಿಸಿದ್ದು, ತಾಂತ್ರಿಕ ಸಮಸ್ಯೆ ದುರಸ್ತಿ ಕಾರ್ಯ ಕೈಗೊಂಡಿದೆ.
ಇದಕ್ಕೂ ಮುನ್ನ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು ಸ್ಥಳಕ್ಕೆ ಭೇಟಿ ನೀಡಿದ್ದರು. ಸುದ್ದಿ ತಿಳಿಯುತ್ತಲೇ ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪ ತಂಡವಾಗಿ ಸ್ಥಳಕ್ಕೆ ದೌಡಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.