ಬಂಗಾರಪೇಟೆ: ಪಟ್ಟಣದ ಪಟ್ಟಾಭಿಷೇಕ ಉದ್ಯಾನದಲ್ಲಿ ಕೆಲವರು ವಾಲಿಬಾಲ್ ಆಡಲು ನಿರ್ಮಿಸಿದ್ದ ಮೈದಾನವನ್ನು ಪುರಸಭೆ ಅಧಿಕಾರಿಗಳು ದಿಢೀರನೇ ತೆರವುಗೊಳಿಸಿದರು.
ಪಟ್ಟಣದ ಹೃದಯ ಭಾಗದಲ್ಲಿರುವ ಪಟ್ಟಾಭಿಷೇಕ ಉದ್ಯಾನವನ್ನು ಹಾಜಿ ಇಸ್ಮಾಯಿಲ್ ಶೇಟ್ ಎಂಬುವರು ಹಲವು ದಶಕಗಳ ಹಿಂದೆ ಸಾರ್ವಜನಿಕರ ಬಳಕೆಗೆ ಎಂದು ಉಚಿತವಾಗಿ ನೀಡಿದ್ದರು. ಆರಂಭದಲ್ಲಿ ಮಕ್ಕಳು ಆಟವಾಡಲು, ವೃದ್ಧರಿಗೆ ಬೆಳಿಗ್ಗೆ ಸಂಜೆ ಸಮಯ ಕಳೆಯಲು ಬಳಕೆ ಆಗುತಿತ್ತು. ದಿನ ಕಳೆದಂತೆ ದಾನವಾಗಿ ನೀಡಿದ್ದ ಜಾಗವನ್ನು ಪುರಸಭೆ ಒಂದು ಕಡೆ ಬಾಲಕಿಯರ ಕಾಲೇಜಿಗೆ, ಮತ್ತೊಂದು ಕಡೆ ಸಿಟಿಜನ್ ಕ್ಲಬ್, ಲಯನ್ಸ್ ಭನವಕ್ಕೆ ನೀಡಿತ್ತು.
ಮತ್ತೊಂದು ದಿಕ್ಕಿನಲ್ಲಿ ವಾಲಿಬಾಲ್ ಪ್ರಿಯರು ನಿತ್ಯ ಬೆಳಿಗ್ಗೆ ಸಂಜೆ ಅಭ್ಯಾಸ ಮಾಡಲು ವಾಲಿಬಾಲ್ ಮೈದಾನ ನಿರ್ಮಿಸಿಕೊಂಡಿದ್ದರು. ಮೈದಾನವನ್ನು ಪುರಸಭೆ ಮುಖ್ಯಾಧಿಕಾರಿ ಚಲಪತಿ ಮತ್ತು ಸಿಬ್ಬಂದಿ ಸೋಮವಾರ ದಿಢೀರನೇ ತೆರವುಗೊಳಿಸಿದರು.
ಉದ್ಯಾನದ ಜಾಗ ಅನ್ಯಕಾರ್ಯಗಳಿಗೆ ಬಳಸದಂತೆ ಯಥಾಸ್ಥಿತಿ ಕಾಪಾಡಬೇಕು ಎನ್ನುವ ನ್ಯಾಯಾಲಯದ ಆದೇಶವಿದೆ. ಆದೇಶದ ಮೇರೆಗೆ ಮೈದಾನ ತೆರವುಗೊಳಿಸಲಾಗಿದೆ. ಪರಿಸರ ದಿನಾಚರಣೆ ಪ್ರಯುಕ್ತ ಸದರಿ ಜಾಗದಲ್ಲಿ ಗಿಡಗಳನ್ನು ನೆಡಲಾಗಿದೆ. ಕಾನೂನು ಪಾಲನೆ ಹಾಗೂ ಪರಿಸರ ದಿನಾಚರಣೆ ಎರಡನ್ನೂ ಪಾಲಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎನ್.ಚಲಪತಿ ತಿಳಿಸಿದರು.
‘ಪುರಸಭೆ ಮುಖ್ಯಾಧಿಕಾರಿ ಹೈಕೋರ್ಟ್ ಆದೇಶ ಪಾಲಿಸಿಲ್ಲ. ಅಧಿಕಾರಿಯಾಗಿ ಆದೇಶ ಪಾಲಿಸುವುದು ನನ್ನ ಕರ್ತವ್ಯ. ವಾಲಿಬಾಲ್ ಮೈದಾನ ತೆರವುಗೊಳಿಸಿ ಗಿಡ ನೆಡುವ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿದೆ’ ಎಂದು ಮುಖ್ಯಾಧಿಕಾರಿ ಚಲಪತಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.