ಬೇತಮಂಗಲ: ಗ್ರಾಮದ ಸಮೀಪದ ಎನ್.ಜಿ. ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂತನಹಳ್ಳಿ ನಿವಾಸಿ ಸುಬ್ರಮಣಿ ಅವರು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಕುಡಿಯುವ ನೀರಿಗಾಗಿ ಏಕಾಂಗಿಯಾಗಿ ಪ್ರತಿಭಟನೆ ಕೈಗೊಂಡಿದ್ದಾರೆ.
‘ನಮ್ಮ ಕುಟುಂಬಕ್ಕೆ ಕುಡಿಯುವ ನೀರು ಕಲ್ಪಿಸುವಂತೆ ಪದೇ ಪದೇ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಕುಡಿಯುವ ನೀರು ಕಲ್ಪಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಪಂತನಹಳ್ಳಿ ಗ್ರಾಮದ ಸುಬ್ರಮಣಿ ತಿಳಿಸಿದರು.
‘ನಮ್ಮ ಮನೆಗೆ ಕುಡಿಯುವ ನೀರು ಬರುತ್ತಿಲ್ಲ. ವಾಟರ್ ಮ್ಯಾನ್ ಉದ್ದೇಶಪೂರ್ವಕವಾಗಿ ನಮ್ಮ ಮನೆಗೆ ನೀರು ಬಿಡುತ್ತಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಜಯಪಾಲ್ ಅವರಿಗೂ ಮನವಿ ಮಾಡಿದ್ದೇನೆ. ಆದರೆ, ಅವರು ಸಮಸ್ಯೆ ಬಗೆಹರಿಸುವ ಬದಲಿಗೆ ಉಡಾಫೆಯಾಗಿ ಉತ್ತರಿಸಿದ್ದಾರೆ’ ಎಂದು ದೂರಿದರು.
ಸುಬ್ರಮಣಿ ಅವರ ಮನೆಗೆ ನೀರು ಬಿಡುವ ವಿಚಾರವಾಗಿ ಗುರುವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಏನೇ ಸಮಸ್ಯೆ ಇದ್ದರೂ ಇತ್ಯರ್ಥಪಡಿಸಿ, ನೀರು ಬರುವಂತೆ ಮಾಡುತ್ತೇನೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಏಜಾಜ್ ಪಾಷ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.