ADVERTISEMENT

ಕಟ್ಟಡ ಶಿಥಿಲ: ಶಾಲೆ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 27 ಮೇ 2022, 13:42 IST
Last Updated 27 ಮೇ 2022, 13:42 IST
ಕೋಲಾರದ ಭೋವಿ ಕಾಲೊನಿಯ ಸರ್ಕಾರಿ ಶಾಲೆಯ ಬಾಡಿಗೆ ಕಟ್ಟಡ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಶಾಲೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಕೋಲಾರದ ಭೋವಿ ಕಾಲೊನಿಯ ಸರ್ಕಾರಿ ಶಾಲೆಯ ಬಾಡಿಗೆ ಕಟ್ಟಡ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಶಾಲೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಕೋಲಾರ: ‘ನಗರದ ಭೋವಿ ಕಾಲೊನಿಯಲ್ಲಿನ ಸರ್ಕಾರಿ ಶಾಲೆಯ ಬಾಡಿಗೆ ಕಟ್ಟಡ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಶಾಲೆಯನ್ನು ತಾತ್ಕಾಲಿಕವಾಗಿ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿನಿಲಯದ 2 ಕೊಠಡಿಗಳಿಗೆ ಸ್ಥಳಾಂತರಿಸಲಾಗುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ತಿಳಿಸಿದರು.

ಶಿಥಿಲ ಶಾಲಾ ಕಟ್ಟಡವನ್ನು ಶುಕ್ರವಾರ ಪರಿಶೀಲಿಸಿ ಮಾತನಾಡಿ, ‘ಶಾಲೆಯಲ್ಲಿ ಒಂದರಿಂದ 5ನೇ ತರಗತಿ ಇದ್ದು, ಕಟ್ಟಡ ಶಿಥಿಲಗೊಂಡಿದೆ. ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಶಾಲಾ ಕಟ್ಟಡದ ಛಾವಣಿ ಸೋರುತ್ತಿದ್ದು, ಶಾಲೆ ನಡೆಸಲು ಕಷ್ಟವಾಗಿತ್ತು. ಮತ್ತೊಂದೆಡೆ ಈ ಭಾಗದಲ್ಲಿ ಶಾಲೆಗೆ ಬಾಡಿಗೆ ಕಟ್ಟಡ ಸಿಗದೆ ತೊಂದರೆಯಾಗಿತ್ತು’ ಎಂದರು.

‘ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಮನವೊಲಿಸಿ ವಸತಿ ನಿಲಯದಲ್ಲಿನ 2 ಕೊಠಡಿಗಳನ್ನು ಶಾಲೆಗೆ ಪಡೆದುಕೊಂಡು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಪೋಷಕರು ಆತಂಕಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

ADVERTISEMENT

‘ಇಲಾಖೆ ಆರಂಭಿಸಿರುವ ಮಳೆಬಿಲ್ಲು 14 ಅಂಶಗಳ ಕಾರ್ಯಕ್ರಮವನ್ನು ಪ್ರತಿನಿತ್ಯ ಮಕ್ಕಳ ಕೈಯಲ್ಲಿ ಮಾಡಿಸುತ್ತಾ ಶಿಕ್ಷಕರು ಸಹ ಭಾಗವಹಿಸುವ ಮೂಲಕ ಕಲಿಕಾ ದೃಢತೆ ಸಾಧಿಸಬೇಕು. ಸರ್ಕಾರ ಮಕ್ಕಳ ಕಲಿಕೆ ಉತ್ತಮಪಡಿಸಲು ಕಲಿಕಾ ಚೇತರಿಕೆ ಎಂಬ ಹೊಸ ಕಾರ್ಯಕ್ರಮ ರೂಪಿಸಿದ್ದು, ಶಿಕ್ಷಕರು ತರಬೇತಿ ಪಡೆದುಕೊಂಡಿದ್ದಾರೆ. ಇದನ್ನು ಶಿಕ್ಷಕರು ತಮ್ಮ ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ಮಕ್ಕಳಿಗೆ ಕಲಿಕೆಗೆ ಒತ್ತು ನೀಡಬೇಕು’ ಎಂದು ಸೂಚಿಸಿದರು.

‘ಪ್ರತಿ ಮಗುವೂ ಓದು ಬರಹದಲ್ಲಿ ಮುಂದುವರಿಯುತ್ತಾ ಪಠ್ಯಕ್ಕೆ ಸಂಬಂಧಿಸಿದ ಸಾಮರ್ಥ್ಯಗಳನ್ನು ಕಲಿಯಲು ಶಿಕ್ಷಕರು ಸಹಕಾರ ನೀಡಬೇಕು. ಇಲಾಖೆಯು ಆಗಿಂದಾಗ್ಗೆ ಜಾರಿಗೊಳಿಸುವ ಆದೇಶಗಳನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಶಿಕ್ಷಕರು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.

ಶಿಕ್ಷಣ ಸಂಯೋಜಕ ಆರ್ ಶ್ರೀನಿವಾಸನ್ ಹಾಗೂ ಶಿಕ್ಷಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.