ADVERTISEMENT

‘ಡಿ.ಕೆ ಸಹೋದರರು ಆತ್ಮಾವಲೋಕನ ಮಾಡಿಕೊಳ್ಳಲಿ’

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 15:26 IST
Last Updated 22 ಅಕ್ಟೋಬರ್ 2020, 15:26 IST

ಕೋಲಾರ: ‘ಸಾರ್ವಜನಿಕ ಜೀವನದಲ್ಲಿ ಆಪಾದನೆ ಸಹಜ. ಪ್ರಶ್ನೆ ಕೇಳಿದಾಗ ಉತ್ತರಿಸಬೇಕು. ಅವನ್ಯಾರು ಎನ್ನುವ ಡಿ.ಕೆ.ಶಿವಕುಮಾರ್‌ ಮತ್ತು ಡಿ.ಕೆ.ಸುರೇಶ್‌ರ ನಡವಳಿಕೆ ಎಷ್ಟು ಸರಿ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಕುಟುಕಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ. ‘ನಾನು ಸಣ್ಣ ವ್ಯಕ್ತಿ. ಡಿ.ಕೆ ಸಹೋದರರು ದೊಡ್ಡವರು. ನಕಲಿ ಮತದಾರರ ಗುರುತಿನ ಚೀಟಿ ಸೃಷ್ಟಿ, ಆದಾಯ ತೆರಿಗೆ ವಂಚನೆ ನಡೆಸುವವರೂ ಅವರೇ. ಸುಪ್ರೀಂ ಕೋರ್ಟ್ ನಕಲಿ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದ ಪ್ರಕರಣ ವಜಾಗೊಳಿಸಿದ ನಂತರ ನ್ಯಾಯಾಲಯದ ತೀರ್ಪು ಪ್ರಶ್ನಿಸುವ ಅವರಿಗೆ ಸ್ವಲ್ಪವೂ ತಿಳಿವಳಿಕೆಯಿಲ್ಲ’ ಎಂದು ಟೀಕಿಸಿದರು.

‘ಡಿ.ಕೆ ಸಹೋದರರು ನಕಲಿ ಮತದಾರರ ಗುರುತಿನ ಚೀಟಿ ಬಗ್ಗೆ ಮತ್ತೆ ಮುಕ್ತವಾಗಿ ಮಾತನಾಡುತ್ತಿದ್ದಾರೆ. ಅವರು ಕಾನೂನು ಉಲ್ಲಂಘಿಸಬಹುದು. ಆದರೆ, ಬೇರೆಯವರು ಉಲ್ಲಂಘನೆ ಮಾಡಿದರೆ ತಪ್ಪು’ ಎಂದು ವ್ಯಂಗ್ಯವಾಡಿದರು.

ADVERTISEMENT

ನೈತಿಕತೆಯಿಲ್ಲ: ‘ರಾಜ್ಯದಲ್ಲಿ ಎರಡೂ ವಿರೋಧ ಪಕ್ಷಗಳು ಅವನತಿಯತ್ತ ಸಾಗಿವೆ. ಅವರಲ್ಲಿ ನೈತಿಕತೆಯಿಲ್ಲ. ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟ ಹೆಚ್ಚಿದೆ. ಇನ್ನು ಜೆಡಿಎಸ್ ಮುಳುಗುತ್ತಿರುವ ಹಡಗು’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಾಗ್ದಾಳಿ ನಡೆಸಿದರು.

‘ರಾಜಕಾರಣದಲ್ಲಿ ಎಲ್ಲರಿಗೂ ಅಧಿಕಾರದ ಆಸೆ ಇರುತ್ತದೆ. ಆದರೆ, ಸಂಘಟನೆಯಲ್ಲಿ ಕೆಲಸ ಮಾಡುವಾಗ ಬಹಿರಂಗ ಹೇಳಿಕೆ ನೀಡದೆ ಒಂದೇ ದೃಷ್ಟಿಕೋನದಿಂದ ಸಾಗಬೇಕು. ಉತ್ತರ ಕರ್ನಾಟಕದ ಮುಖ್ಯಮಂತ್ರಿ ಎಂಬ ವಿಷ ಬೀಜ ಬಿತ್ತುವ ಪ್ರಯತ್ನ ಖಂಡನೀಯ. ಯಡಿಯೂರಪ್ಪ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚು ಕಾಳಜಿ ತೋರಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.