ಕೋಲಾರ: ‘ಪ್ರಥಮ ಪಿಯುಸಿಗೆ ಪರೀಕ್ಷೆ ನಡೆಸುತ್ತಿಲ್ಲ. ಮಕ್ಕಳ ನಿರಂತರ ಕಲಿಕೆ ಪ್ರಯತ್ನದ ಭಾಗವಾಗಿ ಅಸೆಸ್ಮೆಂಟ್ ಮಾತ್ರ ನಡೆಸುತ್ತಿದ್ದೇವೆ. ಇದು ಫಲಿತಾಂಶಕ್ಕೆ ಮಾನದಂಡವಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ಸ್ಪಷ್ಟಪಡಿಸಿದರು.
ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಮನೆಯಲ್ಲೇ ಇದ್ದು, 10 ದಿನ ಪಠ್ಯಪುಸ್ತಕ ನೋಡಿಯೇ ಉತ್ತರ ಬರೆದು ಕಳುಹಿಸಬಹುದು. ಈ ಅಸೆಸ್ಮೆಂಟ್ ವಿದ್ಯಾರ್ಥಿವೇತನದ ಪರಿಗಣನೆಗೆ ಮಾತ್ರ. ವಿನಾಕಾರಣ ಗೊಂದಲ ಬೇಡ. ಸೇತುಬಂಧ ಮಾದರಿಯಲ್ಲಿ ಮನೆಯಲ್ಲೇ ಕುಳಿತು ಕಲಿಕೆ ಮುಂದುವರಿಸಲು ಈ ಪ್ರಯತ್ನವಷ್ಟೇ’ ಎಂದು ವಿವರಿಸಿದರು.
‘ದ್ವಿತೀಯ ಪಿಯುಸಿ ಅಂಕಗಳನ್ನು ಈ ಬಾರಿ ವೃತ್ತಿಪರ ಪ್ರವೇಶ ಪರೀಕ್ಷೆಗೆ (ಸಿಇಟಿ) ಪರಿಗಣಿಸುವುದಿಲ್ಲ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಯಾವುದೇ ಆತಂಕ ಬೇಡ. ಜೂನ್ 21ರೊಳಗೆ ಎಲ್ಲಾ ಜಿಲ್ಲೆಗಳಲ್ಲೂ ಸೋಂಕಿನ ಪ್ರಮಾಣ ತಗ್ಗಲಿದೆ ಎಂಬ ವಿಶ್ವಾಸದೊಂದಿಗೆ ಶಾಲೆ ಆರಂಭಿಸುವ ಚಿಂತನೆ ಮಾಡಲಾಗಿದೆ. ಶಿಕ್ಷಕರು ಕೋವಿಡ್ ವಿರುದ್ಧದ ಯುದ್ಧದಲ್ಲಿ ತಾವೇ ಗೆಲ್ಲುವುದೆಂಬ ಆತ್ಮಸ್ಥೈರ್ಯದಿಂದ ಬದುಕು ಸಾಗಿಸಬೇಕು. ಕೋವಿಡ್ ಲಸಿಕೆ ಕುರಿತ ವದಂತಿಗೆ ಶಿಕ್ಷಕರು ಕಿವಿಗೊಡಬಾರದು. ಕೋವಿಡ್ ವಿರುದ್ಧ ಲಸಿಕೆಯೇ ಗುರಾಣಿ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.