ADVERTISEMENT

ನಗರದಲ್ಲಿ ಕಳೆಗಟ್ಟಿದ ಹೋಳಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 14:59 IST
Last Updated 20 ಮಾರ್ಚ್ 2019, 14:59 IST
ಕೋಲಾರದ ಟೇಕಲ್‌ ರಸ್ತೆಯಲ್ಲಿ ಯುವಕರು ಬುಧವಾರ ಹೋಳಿಯಾಡಿ ಸಂಭ್ರಮಿಸಿದರು.
ಕೋಲಾರದ ಟೇಕಲ್‌ ರಸ್ತೆಯಲ್ಲಿ ಯುವಕರು ಬುಧವಾರ ಹೋಳಿಯಾಡಿ ಸಂಭ್ರಮಿಸಿದರು.   

ಕೋಲಾರ: ನಗರದ ವಿವಿಧ ಬಡಾವಣೆಗಳಲ್ಲಿ ಮಕ್ಕಳು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಬುಧವಾರ ಪರಸ್ಪರ ಬಣ್ಣ ಎರಚಿ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಿದರು.

ಗುಲಾಬಿ, ಹಸಿರು, ಕೆಂಪು, ಕೇಸರಿ, ನೀಲಿ ಹೀಗೆ ಬಗೆ ಬಗೆಯ ಬಣ್ಣದ ಓಕಳಿಯಲ್ಲಿ ಜನ ಮಿಂದೆದ್ದರು. ಮಕ್ಕಳು ಕಿರಾಣಿ ಅಂಗಡಿಗಳಲ್ಲಿ ಬಣ್ಣ ಖರೀದಿಸಿ ಓಕಳಿ ಆಡಿದರು. ಪೋಷಕರು ವಯಸ್ಸಿನ ಅಂತರ ಮರೆತು ಮಕ್ಕಳೊಂದಿಗೆ ಬೆರೆತು ಹೋಳಿ ಹಬ್ಬಕ್ಕೆ ಮೆರುಗು ನೀಡಿದರು.

ಯುವಕರ ಗುಂಪು ಸ್ನೇಹಿತರನ್ನು ಹಿಂಬಾಲಿಸಿ ಹೋಗಿ ಬಣ್ಣ ಎರಚುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಅಲ್ಲದೇ, ತಲೆಗೆ ಕೋಳಿ ಮೊಟ್ಟೆ ಹೊಡೆದು ಸಂಭ್ರಮಿಸಿದರು. ಬೈಕ್‌ಗಳಲ್ಲಿ ರ‍್ಯಾಲಿ ನಡೆಸುತ್ತಾ ಕೇಕೆ ಹಾಕಿದರು. ಕೆಲವೆಡೆ ದಾರಿ ಹೋಕರಿಗೂ ಬಣ್ಣ ಹಾಕಲಾಯಿತು. ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹೋಳಿಯಾಡಿ ಸಂತಸಪಟ್ಟರು.

ADVERTISEMENT

ಜಯನಗರದ ಪುಲಿಕೇಶಿ ಕನ್ನಡಿಗರ ಯುವಕ ಸಂಘದ ಸದಸ್ಯರು ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ನಗರಸಭೆ ಮಾಜಿ ಸದಸ್ಯ ಎಸ್‌.ಆರ್‌.ಮುರಳಿಗೌಡ ಸಹ ಹೋಳಿ ಆಚರಣೆಯಲ್ಲಿ ಭಾಗಿಯಾದರು. ಸೋಮೇಶ್ವರ ಸ್ವಾಮಿ ಮೆರವಣಿಗೆಯು ಹೋಳಿ ಸಂಭ್ರಮವನ್ನು ಕಳೆಗಟ್ಟುವಂತೆ ಮಾಡಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.

ಸಂಸ್ಕೃತಿಯ ಪ್ರತೀಕ: ‘ಹೋಳಿ ಹಬ್ಬವು ಭಾರತೀಯ ಸಂಸ್ಕೃತಿಯ ಪ್ರತೀಕ. ಈ ಆಚರಣೆಯು ಪರಸ್ಪರ ಸೌಹಾರ್ದತೆ ಮತ್ತು ಸ್ನೇಹಮಯ ವಾತಾವರಣ ನಿರ್ಮಿಸಲು ಸಹಕಾರಿ’ ಎಂದು ಬಜರಂಗದಳ ಸದಸ್ಯ ಬಾಲಾಜಿ ಅಭಿಪ್ರಾಯಪಟ್ಟರು.

‘ಹೋಳಿ ಹಬ್ಬದ ಆಚರಣೆಯು ಉತ್ತರ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇಲ್ಲಿಯೂ ಈ ಹಬ್ಬ ಆಚರಿಸುವ ಮೂಲಕ ದೇಶದ ಸಂಸ್ಕೃತಿ, ಪರಂಪರೆ ಉಳಿಸುವುದರ ಜತೆಗೆ ದ್ವೇಷ, ಅಸೂಹೆ ನಾಶಪಡಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಯುವಕ ಯುವತಿಯರು ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗಿದ್ದಾರೆ. ಆಧುನಿಕತೆಯ ಭರಾಟೆಯಲ್ಲಿ ದೇಸಿ ಆಚರಣೆಗಳು ನೇಪಥ್ಯಕ್ಕೆ ಸರಿದಿವೆ. ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಯುವಕ ಯುವತಿಯರನ್ನು ಒಂದೆಡೆ ಸೇರಿಸಿ ಉತ್ಸಾಹ, ಸಂಭ್ರಮ ತುಂಬುವ ಮೂಲಕ ದೇಸಿ ಸಂಸ್ಕೃತಿ ಪರಿಚಯಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.