ಬೇತಮಂಗಲ: ಕೆ.ಸಿ.ವ್ಯಾಲಿ ಯೋಜನೆಯ ಮೂಲಕ ₹1300 ಕೋಟಿ ಅನುದಾನದಲ್ಲಿ ಕೋಲಾರ ಜಿಲ್ಲೆಯ ಕೆರೆಗಳಿಗೆ ನೀರು ಹರಿಸಲಾಗುತ್ತದೆ ಎಂದು ಶಾಸಕಿ ಎಂ.ರೂಪಕಲಾ ಶಶಿಧರ್ ಹೇಳಿದರು.
ಬಿಇಎಂಎಲ್ ಕಂಪನಿ ಸಹಕಾರದಿಂದ ಬೇತಮಂಗಲ ಪಾಲಾರ ಕೆರೆ ಅಂಗಳದಲ್ಲಿರುವ ಜಾಲಿ ಗಿಡಗಳನ್ನು ತೆರವು ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲೆ ದೊಡ್ಡ ಕೆರೆಗಳಾದ ಬೇತಮಂಗಲದ ಪಾಲಾರ ಕೆರೆ ಹಾಗೂ ರಾಮಸಾಗರ ಕೆರೆಗಳಿಗೆ ನೀರು ತುಂಬಿಸಿದರೆ, ಈ ಭಾಗದ ಸಾವಿರಾರು ರೈತ ಕುಟುಂಬಗಳಿಗೆ ಜೀವನ ನಡೆಸಲು ಸಹಕಾರಿ ಆಗುತ್ತದೆ ಎಂದು ಹೇಳಿದರು.
2-3 ತಿಂಗಳಲ್ಲಿ ಕೆ.ಸಿ ವ್ಯಾಲಿ: ಜಿಲ್ಲೆಯ ಅರ್ಧ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ತುಂಬಿದೆ. ಕೆಲವೇ ದಿನಗಳಲ್ಲಿ ಬೇತಮಂಗಲ ಸೇರಿದಂತೆ ಅನೇಕ ಕೆರೆಗಳು ಸಹ ತುಂಬಲಿವೆ. ಅಷ್ಟರಲ್ಲಿಯೇ ದೊಡ್ಡ ಕೆರೆಗಳನ್ನು ಸಂಪೂರ್ಣ ಸ್ವಚ್ಛ ಮಾಡಿ, ಮತ್ತಷ್ಟು ಆಳ ಮಾಡಿ ನೀರು ಶೇಖರಣೆ ಮಾಡಲಾಗುತ್ತದೆ ಎಂದರು.
ಕೆರೆಯ ಮಣ್ಣು ತುಂಬಿಕೊಂಡು ಹೋಗಿ: ರೈತರು ಜಮೀನಿಗೆ, ಇಟ್ಟಿಗೆ ಕಾರ್ಖಾನೆಗೆ ಕೆರೆಯ ಮಣ್ಣು ತುಂಬಿಕೊಂಡು ಹೋಗಬಹುದು. ವಾಹನ ತಂದರೆ ಸಾಕು ಬೇಕಾದಷ್ಟು ಮಣ್ಣನ್ನು ಜೆಸಿಬಿ ಮೂಲಕ ತುಂಬಿಸಲಾಗುವುದು. ಇದರಿಂದ ಕೆರೆಯೂ ಸ್ವಚ್ಛವಾದಂತಾಗುತ್ತದೆ. ಅಗತ್ಯ ಇರುವವರಿಗೆ
ಮಣ್ಣು ದೊರೆಯುತ್ತದೆ ಎಂದು ಹೇಳಿದರು. ಬಿಇಎಂಎಲ್ ಅಧಿಕಾರಿ ವೇಣು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.