ಕೋಲಾರ: ‘ಬಗರ್ ಹುಕ್ಕುಂ ಸಾಗುವಳಿದಾರರಿಗೆ ಅರಣ್ಯ ಇಲಾಖೆಯು ನೀಡುತ್ತಿರುವ ಕಿರುಕುಳ ನಿಲ್ಲಬೇಕು ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಒತ್ತಾಯಿಸಿ ಕರ್ನಾಟಕ ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಎಂ.ವೆಂಕಟೇಶ್ ಮಾತನಾಡಿ, ‘ಅನ್ನದಾತರು ಆಳುವ ಸರ್ಕಾರಗಳ ಧೋರಣೆಗಳಿಂದ ವಂಶಪಾರಂಪರ್ಯವಾಗಿ ನಂಬಿದ್ದ ಕೃಷಿಯಿಂದ ದೂರ ಉಳಿಯುವಂತಾಗಿದೆ. ಕಾರ್ಪೊರೇಟೀಕರಣದ ಕೃಷಿಯನ್ನು ಬೆಂಬಲಿಸುತ್ತಿರುವ ಸರ್ಕಾರಗಳು, ಅದಕ್ಕೆ ರಕ್ಷಕರಾಗಿ ನಿಂತಿರುವ ಅಧಿಕಾರಿಶಾಹಿ ವರ್ಗ ನೀತಿಗಳಿಂದ ಈ ದೇಶದ ರೈತರು ನಿತ್ಯ ಸಂಕಷ್ಟ ಎದುರಿಸುಂತಾಗಿದೆ’ ಎಂದು ಆರೋಪಿಸಿದರು.
‘ಮೊದಲಿನಿಂದಲೂ ಕೃಷಿ ಮಾಡುವ ರೈತರು ಈ ನೆಲದ ಭೂಮಿಯನ್ನೇ ನಂಬಿ ಬದುಕುತ್ತಾ ಬಂದಿದ್ದಾರೆ. ಜಿಲ್ಲೆಯಾದ್ಯಂತ ಲಕ್ಷಾಂತರ ರೈತರು ಕಾನೂನುಬದ್ಧವಾಗಿ ಭೂಮಿಯ ಹಕ್ಕುದಾರರಾಗಿದ್ದಾರೆ. ಆದರೂ ಅವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ’ ಎಂದರು.
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಮಾತನಾಡಿ, ‘ಹಲವಾರು ವರ್ಷಗಳಿಂದ ಸಾಗುವಳಿ ಮಾಡಿ ಸರ್ಕಾರದ ನಿಯಮಾನುಸಾರ ಸಾಗುವಳಿ ಚೀಟಿಯನ್ನು ಪಡೆದು, ಪೋಡಿ ಮಾಡಿಕೊಂಡು ಹೊಸ ಸರ್ವೆ ನಂಬರ್ ಪಡೆದು ಜಿಲ್ಲೆಯಲ್ಲಿ ರೈತರು ಕೃಷಿ ಮಾಡುತ್ತಿದ್ದಾರೆ. ತಮ್ಮ ಜಮೀನು ಅಭಿವೃದ್ಧಿಪಡಿಸಲು, ಬೆಳೆ ಬೆಳೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊಳವೆ ಬಾವಿ ಕೊರೆಯಿಸಿದ್ದಾರೆ. ಇತರೆ ಬೆಳೆಗಳನ್ನು ಬೆಳೆಯಲು ಇದೇ ಜಮೀನಿನ ಮೇಲೆ ಬ್ಯಾಂಕ್ ಮತ್ತು ಖಾಸಗಿಯವರಿಂದ ಸಾಲ ಪಡೆದಿರುತ್ತಾರೆ. ಇಂತಹ ಸಂದರ್ಭದಲ್ಲ ಅರಣ್ಯ ಇಲಾಖೆಯವರು ಪೊಲೀಸ್ ಬಂದೋಬಸ್ತಿನಲ್ಲಿ ಅಕ್ರಮವಾಗಿ ರೈತರ ಜಮೀನಿನಲ್ಲಿ ಇದ್ದ ತರಕಾರಿ ಬೆಳೆ, ರೇಷ್ಮೆ ಗಿಡ, ಮಾವಿನ ಮರ, ಪಾಲಿ ಹೌಸ್ ಮತ್ತು ನೆಟ್ ಹೌಸ್ಗಳನ್ನು ನಾಶಪಡಿಸಿ ಭೂಮಿಯನ್ನು ದೌಜನ್ಯದಿಂದ ವಶಕ್ಕೆ ಪಡೆಯುತ್ತಿರುವುದು ಖಂಡನೀಯ. ಈ ವಿಚಾರದಲ್ಲಿ ಹಲವು ರೈತರು ಕೋರ್ಟ್ನಲ್ಲಿ ಕೇಸು ಹಾಕಿ ಜಂಟಿ ಸರ್ವೆ ಮಾಡಲು ಆದೇಶವಾಗಿದ್ದರೂ ರೈತರ ಗಮನಕ್ಕೆ ತಾರದೆ, ನೋಟಿಸ್ ನೀಡದೇ ಜಂಟಿ ಸರ್ವೆ ಆಗಿದೆ ಎಂದು ಹೇಳುವುದು ಅನುಮಾನಾಸ್ಪದವಾಗಿದೆ’ ಎಂದು ಹೇಳಿದರು.
‘ರಾಜ್ಯ ಸರ್ಕಾರ 3 ಎಕರೆಗಿಂತ ಕಡಿಮೆ ಇರುವ ರೈತರ ಭೂಮಿಯನ್ನು ಯಾವುದೇ ಕಾರಣಕ್ಕೆ ಒತ್ತುವರಿ ತೆರವು ಮಾಡಬಾರದೆಂದು ಹೇಳಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ನಮ್ಮ ಜಿಲ್ಲೆಯಲ್ಲಿ ಪದೇ ಪದೇ ರೈತರಿಗೆ ತೊಂದರೆ ನೀಡುವುದನ್ನು ನಿಲ್ಲಿಸಬೇಕು. ಈ ವಿಚಾರವಾಗಿ ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶ ಮಾಡಿ ರೈತರ ಜಮೀನನ್ನು ರೈತರಿಗೆ ಉಳಿಸಬೇಕು’ ಎಂದು ಆಗ್ರಹಿಸಿದರು.
ಸಂಯುಕ್ತ ಹೋರಾಟ ಸಮಿತಿ ಮುಖಂಡರಾದ ಪಾತಕೋಟೆ ನವೀನ್ ಕುಮಾರ್, ಗಾಂಧಿನಗರ ನಾರಾಯಣಸ್ವಾಮಿ, ಗಂಗಮ್ಮ, ಪಿ.ಶ್ರೀನಿವಾಸ್, ವೆಂಕಟಪ್ಪ, ಸೈಯದ್ ಫಾರೂಕ್, ಕೆ.ಅನಂದ್ ಕುಮಾರ್ , ಅಲಹಳ್ಳಿ ವೆಂಕಟೇಶಪ್ಪ, ವಿ.ನಾರಾಯಣರೆಡ್ಡಿ, ಕೋಟಿಗಾನಹಳ್ಳಿ ಗಣೇಶ್ ಗೌಡ, ಹರಟಿ ಪ್ರಕಾಶ್, ಶಂಕರಪ್ಪ, ಚಿನ್ನಾಪುರ ಮಂಜುನಾಥ, ಸೀಸಂದ್ರ ವೆಂಕಟಾಚಲಪತಿ, ರಾಮಚಂದ್ರ, ರಾಜಪ್ಪ, ವೆಂಕಟೇಶಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.