ADVERTISEMENT

ಬುದ್ಧಿಮಾಂದ್ಯರ ಶಾಲೆಗೆ ಸಿಇಒ ಭೇಟಿ

ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಮಾಡಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 5:34 IST
Last Updated 6 ಆಗಸ್ಟ್ 2025, 5:34 IST
ಕೋಲಾರ ನಗರದ ಹೊರವಲಯದಲ್ಲಿರುವ ಅಂತರಗಂಗಾ ಬುದ್ಧಿಮಾಂದ್ಯರ ವಸತಿ ಶಾಲೆಗೆ ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್ ಪಿ.ಬಾಗೇವಾಡಿ ಮಂಗಳವಾರ ಭೇಟಿ ನೀಡಿದರು
ಕೋಲಾರ ನಗರದ ಹೊರವಲಯದಲ್ಲಿರುವ ಅಂತರಗಂಗಾ ಬುದ್ಧಿಮಾಂದ್ಯರ ವಸತಿ ಶಾಲೆಗೆ ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್ ಪಿ.ಬಾಗೇವಾಡಿ ಮಂಗಳವಾರ ಭೇಟಿ ನೀಡಿದರು   

ಕೋಲಾರ: ನಗರ ಹೊರವಲಯದ ಅಂತರಗಂಗಾ ಬುದ್ಧಿಮಾಂದ್ಯರ ವಸತಿ ಶಾಲೆಗೆ ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್ ಪಿ.ಬಾಗೇವಾಡಿ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ಅಲ್ಲಿನ ಮಕ್ಕಳೊಂದಿಗೆ ಚರ್ಚಿಸಿದ ನಂತರ ಆಡುಗೆ ಮನೆ, ಶೌಚಾಲಯ, ವಸತಿ ಕೊಠಡಿ, ಕಂಪ್ಯೂಟರ್ ಕೊಠಡಿ, ಫಿಜಿಯೋಥೆರಫಿ ಚಿಕಿತ್ಸಾ ಕೊಠಡಿ ವೀಕ್ಷಿಸಿದರು.

‘ಅಂಗವಿಕಲ ಮಕ್ಕಳು ಎಂದರೆ ವಿಶೇಷ ಮಕ್ಕಳು. ಅವರ ಆರೋಗ್ಯಕ್ಕೆ ತಕ್ಕ ವಾತಾವರಣ ನಿರ್ಮಾಣ ಮಾಡಬೇಕು’ ಎಂದು ಅವರು ಶಾಲೆಯ ಅಧಿಕಾರಿ, ಸಿಬ್ಬಂದಿಗೆ ಸಿಇಒ ಸೂಚಿಸಿದರು.

ADVERTISEMENT

ಆವರಣದಲ್ಲಿನ ಕಸದ ರಾಶಿಯನ್ನು ಕಂಡು ತೆರವುಗೊಳಿಸಲು ಹೇಳಿದರು. ‘ಮಕ್ಕಳು ಇರುವ ಕಡೆ ವಾತಾವರಣವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು, ಗಿಡಮರ ಬೆಳೆಸಬೇಕು’ ಎಂದು ಸಲಹೆ ನೀಡಿದರು.

ಕೇವಲ ಕಟ್ಟಡಗಳನ್ನು ನಿರ್ಮಾಣ ಮಾಡಿದರೆ, ಬೋರ್ಡ್ ಹಾಕಿದರೆ ಏನು ಪ್ರಯೋಜನ? ಮಕ್ಕಳನ್ನು ಸೂಕ್ಷ್ಮತೆಯಿಂದ ಪೋಷಣೆ ಮಾಡಿ, ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

‘ಹಿಂದೆ ನಾನು ಬೆಳಗಾವಿಯಲ್ಲಿ ಇದ್ದಾಗ ಬುದ್ಧಿಮಾಂದ್ಯ ಶಾಲೆಗೆ ಅಂತರರಾಷ್ಟ್ರೀಯ ಪುರಸ್ಕಾರ ದೊರೆದಿತ್ತು. ಕೆಎಲ್‍ಇ ಸಂಸ್ಥೆಯವರು ಹೊಂದಾಣಿಕೆ ಮಾಡಿಕೊಂಡು ಫಿಜಿಯೋಥೆರಫಿ ನೀಡುತ್ತಿದ್ದರು. ಸುಸಜ್ಜಿತವಾಗಿ ನಿರ್ವಹಣೆಗೆ ಬಹುಮಾನ ದೊರೆತಿತ್ತು. ಅದೇ ರೀತಿ ಈ ಶಾಲೆಯೂ ಆಗಬೇಕು’ ಎಂದು ಹೇಳಿದರು.

ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆದುಕೊಂಡು ಅದರ ಪ್ರಯೋಜನ ಮಕ್ಕಳಿಗೆ ಕಲ್ಪಿಸಬೇಕು ಎಂದು ಸೂಚಿಸಿದರು.

ಶಾಲೆಯ ಸಂಸ್ಥಾಪಕ ಅಧ್ಯಕ್ಷ ಶಂಕರ್ ಮಾತನಾಡಿ, ‘ಶಾಲೆಯಲ್ಲಿ 64 ಮಕ್ಕಳು, ವೃದ್ಧರು ವಾಸವಿದ್ದು, ಸಮರ್ಪಕವಾಗಿ ಆರೈಕೆ ಮಾಡಲಾಗುತ್ತಿದೆ. ಪ್ರತಿ ದಿನ ಆಹಾರ ನೀಡುತ್ತಿದ್ದು, ಬಟ್ಟೆ ಸ್ವಚ್ಛತೆ ಮಾಡಲಾಗುತ್ತಿದೆ. ಮಕ್ಕಳಿಗೆ ತರಗತಿಗಳನ್ನು ನಡೆಸುವುದರ ಜತೆಗೆ ಕಂಪ್ಯೂಟರ್ ಕಲಿಸಲಾಗುತ್ತಿದೆ. ಈ ಶಾಲೆಯಿಂದ ಇಬ್ಬರು ಮಕ್ಕಳನ್ನು ಎಂ.ಎ.ಎಸ್ ರಾಮಯ್ಯ ಸಂಸ್ಥೆಯವರು ಕೆಲಸಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಶಾಲೆಯಲ್ಲಿ ವಾಸವಿರುವ ಮಕ್ಕಳಿಗೆ ಪ್ರತಿ ತಿಂಗಳು ತಲಾ ₹ 10 ಸಾವಿರ ಸರ್ಕಾರದಿಂದ ದೊರೆಯುತ್ತಿದೆ, ಜತೆಗೆ ದಾನಿಗಳು ಕಟ್ಟಡಗಳನ್ನು ಕಟ್ಟಿಸಿಕೊಟ್ಟಿದ್ದಾರೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮಂಜುಳಾ, ಶಾಲೆಯ ಮುಖ್ಯಶಿಕ್ಷಕಿ ಪ್ರಜ್ಞಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.