ADVERTISEMENT

ಕಸಾಪ ಕನ್ನಡಿಗರ ಶಕ್ತಿ ಕೇಂದ್ರವಾಗಲಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 15:36 IST
Last Updated 6 ಏಪ್ರಿಲ್ 2021, 15:36 IST

ಕೋಲಾರ: ‘ಕನ್ನಡ ಸಾಹಿತ್ಯ ಪರಿಷತ್ತನ್ನು ಸಮಸ್ತ ಕನ್ನಡಿಗರ ಶಕ್ತಿ ಕೇಂದ್ರವಾಗಿಸುವ ಮೂಲಕ ನಾಡು-ನುಡಿಯ ಬೆಳವಣಿಗೆಗೆ ಅರ್ಥಿಕತೆ ಸದೃಢಪಡಿಸುವ ಕನಸಿದೆ’ ಎಂದು ಪರಿಷತ್ತಿನ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ಮಾಯಣ್ಣ ಹೇಳಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಸಾಪ ಬೆಂಗಳೂರು ನಗರ ಘಟಕದ ಅಧ್ಯಕ್ಷನಾಗಿ ಅತ್ಯುತ್ತಮ ಕೆಲಸ ಮಾಡಿದ್ದೇನೆ. ಕನ್ನಡಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಸಮಸ್ತ ಕರ್ನಾಟಕವನ್ನು ಕನ್ನಡಮಯವಾಗಿಸುತ್ತೇವೆ’ ಎಂದು ಭರವಸೆ ನೀಡಿದರು.

‘6.50 ಕೋಟಿ ಜನಸಂಖ್ಯೆಯುಳ್ಳ ಕರ್ನಾಟಕದಲ್ಲಿ ಕಸಾಪ ಕೇವಲ 3.25 ಲಕ್ಷ ಸದಸ್ಯರನ್ನು ಒಳಗೊಂಡಿದೆ. ಸದಸ್ಯರ ಹೆಚ್ಚಿಸಬೇಕಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಧನಸಹಾಯ ಕೋರಿ ಸರ್ಕಾರದತ್ತ ಮುಖ ಮಾಡುವುದನ್ನು ಬಿಟ್ಟು ಪರಿಷತ್ತನ್ನು ಅರ್ಥಿಕವಾಗಿ ಸಮೃದ್ಧಗೊಳಿಸಲು ಪ್ರತ್ಯೇಕ ಶಾಶ್ವತ ನಿಧಿ ಸ್ಥಾಪಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಕಸಾಪ ಮುದ್ರಣಾಲಯವನ್ನು ಆಧುನೀಕರಿಸಿ ಹೊರ ಮುದ್ರಣಕ್ಕೆ ಅಣಿಗೊಳಿಸಬೇಕು. ಕಸಾಪವನ್ನು ಸರ್ವಶಕ್ತಗೊಳಿಸುವ ನಿಟ್ಟಿನಲ್ಲಿ ನಾಡಿನ ಚಿಂತಕರು, ತಜ್ಞರು, ಪ್ರಾಜ್ಞರೊಂದಿಗೆ ಸಮಾಲೋಚಿಸಿ ಕ್ರಿಯಾಯೋಜನೆ ರೂಪಿಸಿದ್ದೇವೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹ 5 ಕೋಟಿ, ಜಿಲ್ಲಾ ಮತ್ತು ಗಡಿ ನಾಡಿನ ಸಾಹಿತ್ಯ ಸಮ್ಮೇಳನಕ್ಕೆ ತಲಾ ₹ 10 ಲಕ್ಷ ಅನುದಾನ ಒದುಗಿಸುವ ಸಂಕಲ್ಪವಿದೆ’ ಎಂದರು.

‘ರಾಜ್ಯದ ಗಡಿ ಭಾಗದ ಕೋಲಾರ, ಬೆಳಗಾವಿ ಜಿಲ್ಲೆಯಲ್ಲಿ ಆಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಜತೆಗೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಕನ್ನಡದ ಭಾಷೆಗೆ ಒತ್ತು ನೀಡುತ್ತೇವೆ. ಪರಿಷತ್ತನ್ನು ಜನಸಾಮಾನ್ಯರ ಪರಿಷತ್‌ ಆಗಿ ಪರಿವರ್ತಿಸುತ್ತೇವೆ. ಪರಭಾಷೆಯವರೊಂದಿಗೆ ಸಂಘರ್ಷ ಬೇಕಿಲ್ಲ. ಕನ್ನಡದ ಸಂಸ್ಕೃತಿಯನ್ನು ಅವರಿಗೂ ಕಲಿಸಿ ಕನ್ನಡಿಗರಾಗಿ ಪರಿವರ್ತಿಸಬೇಕು’ ಎಂದು ಅಭಿಪ್ರಾಯಪಟ್ಟರು.

ರಾಜ್ಯ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ತ್ಯಾಗರಾಜ್, ಉಪಾಧ್ಯಕ್ಷ ಆರ್.ಬಿ.ವೆಂಕಟೇಶ್, ಜಿಲ್ಲಾ ಘಟಕದ ಅಧ್ಯಕ್ಷ ನಾ.ಮುನಿರಾಜು. ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಪ್ಪ, ಉಪನ್ಯಾಸಕ ಕಾಳಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.