ಕೋಲಾರ: ನಗರದ ಎಸ್ಎನ್ಆರ್ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಣಂತಿಯೊಬ್ಬರು ಮಗು ಬಿಟ್ಟು ಪರಾರಿಯಾದ ಪ್ರಕರಣ ಶುಕ್ರವಾರ ನಸುಕಿನಲ್ಲಿ ನಡೆದಿದೆ.
ಕಳೆದ ನಾಲ್ಕು ದಿನಗಳ ಅಂತರದಲ್ಲಿ ಈ ಆಸ್ಪತ್ರೆಯಲ್ಲಿ ಶಿಶು ಬಿಟ್ಟು ಹೋಗಿರುವ ಎರಡನೇ ಪ್ರಕರಣ ಇದಾಗಿದೆ.
19 ವರ್ಷ ಹರೆಯದ ಯುವತಿ ಹಸುಳೆಯನ್ನು ಬಿಟ್ಟು ಹೋಗಿದ್ದು, ಆಸ್ಪತ್ರೆಗೆ ದಾಖಲಾಗುವ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೆಸಂದ್ರ ಗ್ರಾಮದ ವಿಳಾಸ ನೀಡಿರುವುದು ಗೊತ್ತಾಗಿದೆ.
ಗುರುವಾರ ಸಂಜೆ ತಾಯಿ ಮತ್ತು ಮಕ್ಕಳ ವಿಭಾಗದ ವಾರ್ಡ್ಗೆ ಬಂದು ಆ ಯುವತಿ ದಾಖಲಾಗಿದ್ದಾರೆ. ಜೊತೆಯಲ್ಲಿ ಒಬ್ಬರು ಇದ್ದರು ಎಂಬುದು ಗೊತ್ತಾಗಿದೆ. ಏಳೂವರೆ ಸುಮಾರಿಗೆ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ನಸುಕಿನ ಐದು ಗಂಟೆ ಸುಮಾರಿಗೆ ಆಸ್ಪತ್ರೆಯಿಂದ ಹೊರಹೋದವರು ಮತ್ತೆ ಬಂದಿಲ್ಲ. ಮಗುವಿನ ತಾಯಿ ನಾಪತ್ತೆ ಆಗಿರುವುದು ಗೊತ್ತಾಗಿ ಆಸ್ಪತ್ರೆಯ ನರ್ಸ್ಗಳು ಹಾಗೂ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದಾರೆ.
‘ಹೆರಿಗೆ ಬಳಿಕ ಮಗುವನ್ನು ವಿಶೇಷ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ತಾಯಿ ಮತ್ತೊಂದು ವಾರ್ಡ್ನಲ್ಲಿದ್ದರು. ಮಗು 1,500 ಗ್ರಾಂ ತೂಕವಿದೆ. ಆದರೆ, ನಮ್ಮ ಸಿಬ್ಬಂದಿ ಬೆಳಿಗ್ಗೆ ಗಮನಿಸಿದಾಗ ತಾಯಿ ನಾಪತ್ತೆಯಾಗಿದ್ದರು. ಪೋಷಕರ ಪತ್ತೆಗಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಸಿ.ಸಿ.ಟಿ.ವಿ ದೃಶ್ಯಾವಳಿಯನ್ನು ಪರಿಶೀಲಿಸಲಾಗುವುದು. ಮಗುವನ್ನು ಮಕ್ಕಳ ರಕ್ಷಣಾ ಘಟಕದ ಸುಪರ್ದಿಗೆ ಕೊಡಲು ಪ್ರಕ್ರಿಯೆಗಳು ನಡೆಯುತ್ತಿವೆ’ ಎಂದು ಜಿಲ್ಲಾ ಸರ್ಜನ್ ಡಾ.ಜಗದೀಶ್ ಹೇಳಿದರು.
‘ಮಗು ಸದ್ಯ ನಮ್ಮ ಆರೈಕೆಯಲ್ಲಿದ್ದು, ಹಾಲಿನ ಬ್ಯಾಂಕ್ನಿಂದ ಹಾಲುಣಿಸಲಾಗುತ್ತಿದೆ. ಆದರೆ, ದಾಖಲಾತಿ ಸಂದರ್ಭದಲ್ಲಿ ಯುವತಿಯು ನೀಡಿದ್ದ ವಿಳಾಸ, ಮೊಬೈಲ್ ಸಂಖ್ಯೆ ನಕಲಿಯಾಗಿದೆ’ ಎಂದರು.
ಅವಧಿಪೂರ್ವ ಪ್ರಸವ ಸಾಧ್ಯತೆ:
ಮಗು 1,500 ಗ್ರಾಂ ತೂಕವಿದೆ. ಇದನ್ನು ಗಮನಿಸಿದರೆ ಅವಧಿಪೂರ್ವ ಪ್ರಸವವಾಗಿರುವ ಸಾಧ್ಯತೆ ಇದೆ. ತಾಯಿಯು ತನ್ನ ಗರ್ಭ ವಿಚಾರದ ಯಾವುದೇ ದಾಖಲೆ, ಮಾಹಿತಿ ನೀಡಿಲ್ಲ. ಮಗುವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸುಪರ್ದಿಗೆ ಒಪ್ಪಿಸಲಾಗುವುದು. ಸದ್ಯ ನಮ್ಮಲ್ಲೇ ಇರಿಸಿಕೊಂಡು ಶಿಶುವಿಗೆ ಚಿಕಿತ್ಸೆ ನೀಡುತ್ತಿದ್ದೇವೆ’ ಎಂದು ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಕಮಲಾಕರ್ ತಿಳಿಸಿದರು.
ಜನ್ಮ ನೀಡಿ 10 ಗಂಟೆ ಕಳೆಯುಷ್ಟರಲ್ಲಿ ಮಗುವನ್ನು ಬಿಟ್ಟು ತಾಯಿ ಪರಾರಿಯಾಗಿರುವುದಕ್ಕೆ ಟೀಕೆಗಳು ವ್ಯಕ್ತವಾಗಿವೆ. ಆ ಯುವತಿಗೆ ಮಾನವೀಯತೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
‘ಮಗು ಬಿಟ್ಟು ತಾಯಿ ಪರಾರಿಯಾಗಿದ್ದಾರೆ ಎಂಬ ಮಾಹಿತಿ ನನಗೆ ಬಂತು. ತಕ್ಷಣ ಇಲ್ಲಿಗೆ ಬಂದು ಮಗು ನೋಡಿ ವಿಚಾರಿಸಿದೆ. ಜನ್ಮನೀಡಿದ ತಾಯಿಗಂತೂ ತನ್ನ ಮಗುವಿನ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಇನ್ನು ನರ್ಸ್ಗಳು, ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದರು? ಬಾಣಂತಿ ಹೋಗುವುದು ಗೊತ್ತಾಗಲಿಲ್ಲವೇ? ಆ ಸಂದರ್ಭದಲ್ಲಿ ಯಾರೂ ಕಾವಲು ಇರಲಿಲ್ಲವೇ? ಇದು ಆಸ್ಪತ್ರೆಯಿಂದ ಆಗಿರುವ ಲೋಪ’ ಎಂದು ಹೋರಾಟಗಾರ್ತಿ ಡಿಎಸ್ಎಸ್ ಮಂಜುಳಾ ಆಕ್ರೋಶ ವ್ಯಕ್ತಪಡಿಸಿದರು.
ಪದೇಪದೇ ಭದ್ರತಾ ವೈಫಲ್ಯ
ಎಸ್ಎನ್ಆರ್ ಜಿಲ್ಲಾಸ್ಪತ್ರೆಯಲ್ಲಿ ಪದೇಪದೇ ಭದ್ರತಾ ವೈಫಲ್ಯ ನಡೆಯುತ್ತಿರುವುದಕ್ಕೆ ಸಾರ್ವಜನಿಕರು ಹಾಗೂ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2023ರ ಅಕ್ಟೋಬರ್ 26ರಂದು ಮೂವರು ಮಹಿಳೆಯರು ಆಸ್ಪತ್ರೆಯಿಂದ ಗಂಡು ಶಿಶುವನ್ನು ಬ್ಯಾಗ್ನಲ್ಲಿ ಹಾಕಿಕೊಂಡು ಪರಾರಿಯಾಗಿದ್ದರು. ನಂತರ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಆಧಾರದ ಮೇಲೆ ಪೊಲೀಸರು ಪತ್ತೆ ಹಚ್ಚಿದ್ದರು.
ಇನ್ನು ಇದೇ ಜೂನ್ 5ರಂದು ವ್ಯಕ್ತಿಯೊಬ್ಬರು ಆಸ್ಪತ್ರೆಗೆ ನವಜಾತ ಗಂಡು ಶಿಶುವೊಂದನ್ನು ದಾಖಲಿಸಿದ್ದು, ನಂತರ ಆ ಮಗುವಿನ ಮಾರಾಟಕ್ಕೆ ಯತ್ನ ನಡೆದಿರುವ ಗುಮಾನಿ ಕೇಳಿಬಂದಿತ್ತು. ‘ಮಗುವಿನ ತಾಯಿ ಸತ್ತು ಹೋಗಿದ್ದು ಯಾರೂ ದಿಕ್ಕು ಇಲ್ಲ, ತಂದೆ ಜೈಲಿನಲ್ಲಿದ್ದಾರೆ’ ಎಂದು ಹೇಳಿದ್ದರು. ನಂತರ ಪೊಲೀಸರ ನೆರವಿನಿಂದ ತಾಯಿಯನ್ನು ಪತ್ತೆ ಮಾಡಿ ಕರೆತರಲಾಗಿತ್ತು. ‘ಹೌದು, ನಾನೇ ತಾಯಿ’ ಎಂದು ಹೇಳಿಕೊಂಡ ಯುವತಿಯು, ಮಗು ಬೇಡವೆಂದಿದ್ದರು. ಈಗ ಹಸುಳೆಯನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಬಾಣಂತಿ ಪರಾರಿಯಾಗಿದ್ದಾರೆ.
ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ
‘ಏನೋ ಕೆಲಸಕ್ಕೆಂದು, ಚಹಾ ಕುಡಿಯಲೋ ಬಾಣಂತಿ ಆಸ್ಪತ್ರೆಯಿಂದ ಆಚೆ ಹೋಗಿರಬಹುದೆಂದು ಭದ್ರತಾ ಸಿಬ್ಬಂದಿ ಭಾವಿಸಿರಬಹುದು. ಈ ಪ್ರಕರಣದಲ್ಲಿ ತನಿಖೆ ನಡೆಸಿ ತಪ್ಪಿಸ್ಥರಿಗೆ ಕ್ರಮ ವಹಿಸುತ್ತೇವೆ’ ಎಂದು ಜಿಲ್ಲಾ ಸರ್ಜನ್ ಡಾ.ಜಗದೀಶ್ ಹೇಳಿದರು.
ನಸುಕಿನಲ್ಲಿ ಬಾಣಂತಿ ಪರಾರಿಯಾಗಿರುವ ಸಂಬಂಧ ಆಸ್ಪತ್ರೆಯಲ್ಲಿ ಭದ್ರತಾ ವೈಫಲ್ಯ ಆಗಿದೆಯೇ, ಭದ್ರತಾ ಸಿಬ್ಬಂದಿ ಇರಲಿಲ್ಲವೇ ಎಂಬ ‘ಪ್ರಜಾವಾಣಿ’ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.
ಮಗು ಬೇಡವೆಂದು ಬರೆದುಕೊಟ್ಟ ತಾಯಿ
ಮತ್ತೆಪ್ರಕರಣದಲ್ಲಿ ಜೂನ್ 5ರಂದು ಪುರುಷರೊಬ್ಬರು ಆಸ್ಪತ್ರೆಗೆ ದಾಖಲಿಸಿ ಹೋಗಿದ್ದ ಮಗು ತನ್ನದೇ ಎಂದು ಯುವತಿಯೊಬ್ಬರು ಒಪ್ಪಿಕೊಂಡಿದ್ದಾರೆ. ಆದರೆ, ಪೋಷಣೆ ಕಷ್ಟವೆಂದು ಮಗು ಬೇಡವೆಂದು ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಬರೆದು ಕೊಟ್ಟಿದ್ದಾರೆ. ಆ ಮಗುವಿನ ತಾಯಿಯನ್ನು ಪೊಲೀಸರು ಪತ್ತೆ ಹಚ್ಚಿ ಕರೆತಂದಿದ್ದರು.
ಈ ವಿಚಾರವನ್ನು ಮಕ್ಕಳ ತಜ್ಞ ಡಾ.ಕಮಲಾಕರ್ ತಿಳಿಸಿದ್ದು, ಮಗುವಿಗೆ ಚಿಕಿತ್ಸೆ ಬಳಿಕ ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರ ಸುಪರ್ದಿಗೆ ಒಪ್ಪಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.