ADVERTISEMENT

ಕೋಲಾರ: ಫೋನ್‌ ಕರೆ ಕದ್ದಾಲಿಕೆ ನಾಚಿಕೆಗೇಡು, ಮುನಿಸ್ವಾಮಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 13:14 IST
Last Updated 15 ಆಗಸ್ಟ್ 2019, 13:14 IST

ಕೋಲಾರ: ‘ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರ ಉಳಿಸಿಕೊಳ್ಳಲು ಪ್ರಮುಖ ರಾಜಕೀಯ ಮುಖಂಡರ ದೂರವಾಣಿ ಕರೆ ಕದ್ದಾಲಿಕೆ ಮಾಡಿಸಿರುವುದು ನಾಚಿಕೆಗೇಡು’ ಎಂದು ಸಂಸದ ಎಸ್‌.ಮುನಿಸ್ವಾಮಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮೈತ್ರಿ ಸರ್ಕಾರದ ಭಾಗವಾಗಿದ್ದ ಜೆಡಿಎಸ್‌ನ ಶಾಸಕರೇ ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸವಾಗಿಲ್ಲ ಎಂದು ಅಸಮಾಧಾನಗೊಂಡು ಪಕ್ಷ ತೊರೆದರು. ಆಗ ಕುಮಾರಸ್ವಾಮಿಯವರು ಆ ಶಾಸಕರ, ವಿಪಕ್ಷ ನಾಯಕರ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರ ಫೋನ್‌ ಕರೆ ಕದ್ದಾಲಿಕೆ ಮಾಡಿಸಿರುವುದು ಸರಿಯಲ್ಲ’ ಎಂದು ಗುಡುಗಿದರು.

‘ರಾಜ್ಯದಲ್ಲಿ ನೆರೆ ಹಾವಳಿಯಿದ್ದು, ಬಿಜೆಪಿಯ ಎಲ್ಲಾ ಶಾಸಕರು ನೆರೆ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ಆದರೆ, ವಿಪಕ್ಷಗಳ ನಾಯಕರು ರಾಜಕೀಯ ದುರುದ್ದೇಶಕ್ಕೆ ಬಿಜೆಪಿ ಹಾಗೂ ಮುಖ್ಯಮಂತ್ರಿಯವರ ವಿರುದ್ಧ ಅನಗತ್ಯ ಟೀಕೆ ಮಾಡುತ್ತಿದ್ದಾರೆ. ನೆರೆ ಹಾವಳಿ ಇರುವುದರಿಂದ ಸಚಿವ ಸಂಪುಟ ರಚನೆ ಸಾಧ್ಯವಾಗಿಲ್ಲ. ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಸದ್ಯದಲ್ಲೇ ಪರಿಹಾರ ಬಿಡುಗಡೆಯಾಗುತ್ತದೆ’ ಎಂದು ಹೇಳಿದರು.

ADVERTISEMENT

ಕದ್ದಾಲಿಕೆ ಮಾಡಿಸಿಲ್ಲ: ‘ಕುಮಾರಸ್ವಾಮಿ ಅವರು ಫೋನ್‌ ಕರೆ ಕದ್ದಾಲಿಕೆ ಮಾಡಿಸಿಲ್ಲ. ಅವರದು ಅಂತಹ ಜಾಯಮಾನವಲ್ಲ’ ಎಂದು ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.

‘ಫೋನ್‌ ಕರೆಗಳ ಕದ್ದಾಲಿಕೆ ಎಲ್ಲಿ ಆಗಿದೆ, ಯಾರ ಕರೆ ಕದ್ದಾಲಿಕೆ ಆಗಿವೆ ಎಂಬ ಬಗ್ಗೆ ಮಾಹಿತಿಯಿಲ್ಲ. ಅತೃಪ್ತ ಶಾಸಕರು ಅವರ ಮೂಗಿನ ನೇರಕ್ಕೆ ಆರೋಪ ಮಾಡುತ್ತಾರೆ. ಅದಕ್ಕೆಲ್ಲಾ ಉತ್ತರಿಸುವ ಅಗತ್ಯವಿಲ್ಲ. ನಾನು ಯಾರೊಂದಿಗೂ ಏನನ್ನೂ ದೂರವಾಣಿಯಲ್ಲಿ ಮಾತನಾಡಿಲ್ಲ. ಹೀಗಾಗಿ ನನ್ನ ಫೋನ್‌ ಕರೆ ಕದ್ದಾಲಿಕೆ ಆಗಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.