ಬಂಗಾರಪೇಟೆ: ಕಾಮಸಮುದ್ರ ಮತ್ತು ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣಗಳನ್ನು ಭೇದಿಸಿರುವ ಕಾಮಸಮುದ್ರ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಆರೋಪಿಯ ಬಳಿಯಿಂದ ₹7 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ತಾಲ್ಲೂಕಿನ ಶಿವಲಿಂಗ ಗ್ರಾಮದ ಚಂದ್ರಪ್ಪ (48) ಬಂಧಿತ ಆರೋಪಿ. ಆತನ ಬಳಿಯಿದ್ದ ₹6.70 ಲಕ್ಷ ಮೌಲ್ಯದ 69 ಗ್ರಾಂ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಪೊಲೇನಹಳ್ಳಿ ಗ್ರಾಮದ ಮುನಿವೆಂಕಟಪ್ಪ ಎಂಬುವರು ತಮ್ಮ ಮನೆಯಲ್ಲಿ ಕಳ್ಳತನವಾಗಿದೆ ಎಂಬ ಬಗ್ಗೆ ಏಪ್ರಿಲ್ 4ರಂದು ಕಾಮಸಮುದ್ರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಡಿವೈಎಸ್ಪಿ ಎಸ್. ಪಾಂಡುರಂಗ ನೇತೃತ್ವದಲ್ಲಿ ತನಿಖೆಗೆ ಇಳಿದಿದ್ದ ಸಿಪಿಐ ಜಿ.ಸಿ. ನಾರಾಯಣಸ್ವಾಮಿ ಮತ್ತು ಪಿಎಸ್ಐ ಕಿರಣ್ಕುಮಾರ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಕಾಮಸಮುದ್ರ ಪಿಎಸ್ಐ ಬಿ.ವಿ. ಕಿರಣ್ ಕುಮಾರ್, ವಿಶೇಷ ಅಪರಾಧ ಪತ್ತೆ ತಂಡದ ಸಿಬ್ಬಂದಿ ಮಂಜುನಾಥರೆಡ್ಡಿ, ಮುನಾವರ್ಪಾಷ, ರಾಮರಾವ್, ರಾಮಕೃಷ್ಣಾರೆಡ್ಡಿ, ಮಂಜುನಾಥ, ಮಾರ್ಕೊಂಡ, ಲಕ್ಷ್ಮಣತೇಲಿ ಹಾಗೂ ಜೀಪ್ ಚಾಲಕ ಗುರುಮೂರ್ತಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.