ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ಎನ್.ಲೋಕನಾಥ್ ಮಂಗಳವಾರ ಕೋಲಾರದ ಮಹಿಳಾ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಮಾತನಾಡಿದರು
ಕೋಲಾರ: ಕಾಲೇಜಿನ ಕೊಠಡಿಗಳ ಗೋಡೆ ಮೇಲೆ ಬರೆದಿದ್ದ ಬರಹಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ಎನ್.ಲೋಕನಾಥ್, ಈ ಬಗ್ಗೆ ಉಪನ್ಯಾಸಕರು ಗಮನಹರಿಸಿ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಿದರು.
ಅವರು ಮಂಗಳವಾರ ನಗರದ ಮಹಿಳಾ ಸರ್ಕಾರಿ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗೋಡೆ ಬರಹ ನೋಡಿ ಚಕಿತರಾದರು. ಯುವಕರಂತೆ ಯುವತಿಯರು ಕೂಡ ಗೋಡೆಗಳ ಮೇಲೆ ಬರೆಯಲು ಶುರು ಮಾಡಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.
ಕಾಲೇಜಿನ ಎಲ್ಲಾ ಕೊಠಡಿಗಳು, ಮೌಲ್ಯಮಾಪನ ಕೇಂದ್ರ, ಗ್ರಂಥಾಲಯ, ವಿಜ್ಞಾನ ಲ್ಯಾಬ್ ಹಾಗೂ ಕಂಪ್ಯೂಟರ್ ಲ್ಯಾಬ್ಗಳಿಗೆ ತೆರಳಿ ಕೊಠಡಿಗಳ ಸ್ಥಿತಿಗತಿ ಪರಿಶೀಲಿಸಿದರು. ನೀರು ಸುರಿಯುತ್ತಿರುವುದನ್ನು ಕಂಡು, ತಕ್ಷಣ ಕೊಠಡಿಗಳ ನವೀಕರಣ ಆಗಬೇಕು. ಸ್ವಚ್ಛತೆ ಕಾಪಾಡಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಡಿ.ಇ.ಗಂಗಾಧರ್ ರಾವ್ ಅವರಿಗೆ ಸೂಚಿಸಿದರು.
‘ಸೆಮಿಸ್ಟರ್ ಪರೀಕ್ಷೆಗಳು ಸಮೀಪಿಸುತ್ತಿದ್ದು ಚೆನ್ನಾಗಿ ಓದಿ ಉತ್ತಮ ಅಂಕ ಪಡೆಯಬೇಕು. ಪೋಷಕರ ಕನಸನ್ನು ನನಸು ಮಾಡಿ. ಮೊಬೈಲ್ ಬಳಕೆಯಿಂದ ದೂರವಿರಿ. ಗೋಡೆಗಳ ಮೇಲೆ ಯಾವುದೇ ರೀತಿಯ ಬರಹಗಳನ್ನು ಬರೆಯಬೇಡಿ. ಇಷ್ಟಪಟ್ಟು ಓದಿ, ಓದಿದನ್ನು ಮನನ ಮಾಡಿ’ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳ ಸೆಮಿಸ್ಟರ್ ಪರೀಕ್ಷೆಗಳು ಜುಲೈ 9ರಿಂದ ಜೂನ್ 11 ರ ವರೆಗೆ ನಡೆಯಲಿವೆ. ಪರೀಕ್ಷೆಗಳನ್ನ ಕಟ್ಟುನಿಟ್ಟಾಗಿ ನಡೆಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೇಗಬೇಗನೇ ಮೌಲ್ಯಮಾಪನ ನಡೆಸಿ ಫಲಿತಾಂಶ ಕೊಡಲಾಗುವುದು ಎಂದರು.
ಕಾಲೇಜಿನ ಪ್ರಾಂಶುಪಾಲ ಡಿ.ಇ.ಗಂಗಾಧರ್ ರಾವ್, ಸ್ನಾತಕೋತ್ತರ ಸಂಯೋಜನಾಧಿಕಾರಿ ಶ್ರೀನಿವಾಸ್, ಭೌತ ವಿಜ್ಞಾನ ಸಹ ಪ್ರಾಧ್ಯಾಪಕ ಎನ್.ರಾಮ್ ಪ್ರಸಾದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.