ಕುಷ್ಟಗಿ: ‘ಇಲ್ಲಿಯ ಪುರಸಭೆಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಮಾಜಿ ಅಧ್ಯಕ್ಷ ಕಲ್ಲೇಶ ತಾಳದ, ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ಜಿಲಾನಿ ಮುಲ್ಲಾ ಭಾನುವಾರ ಆರೋಪಿಸಿದ್ದಾರೆ.
ಸುದ್ದಿಗಾರ ಜತೆ ಮಾತನಾಡಿದ ಅವರು ಈಗಿನ ಅಧ್ಯಕ್ಷರು ಅಧಿಕಾರಕ್ಕೆ ಬರುವ ಮೊದಲೆ ಸಾರ್ವಜನಿಕ ಸ್ಮಶಾನ ಅಭಿವೃದ್ಧಿ, ಬಸವ ಉದ್ಯಾನ ಅಭಿವೃದ್ಧಿ, ಸರ್ಕಾರಿ ಆಸ್ಪತ್ರೆ ಮುಂದಿನ ರಸ್ತೆ ಪಕ್ಕ ಪಾದಚಾರಿ ರಸ್ತೆ ನಿರ್ಮಿಸುವುದು, ಚರಂಡಿ, ಕಾಂಕ್ರೀಟ್ ರಸ್ತೆ ಸೇರಿದಂತೆ 2 ಕೋಟಿ ಮೊತ್ತದ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿತ್ತು ಆದರೆ ಈವರೆಗೂ ಅನುಷ್ಠಾನಗೊಂಡಿಲ್ಲ ಎಂದು ದೂರಿದರು.
‘ಶಾಸಕರು, ಸರ್ಕಾರದಿಂದ ಸಾಕಷ್ಟು ಅನುದಾನ ಬಂದರೂ ಅದನ್ನು ಸಮರ್ಪಕ ಮತ್ತು ಪರಿಣಾಮಕಾರಿ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ಸಾಮರ್ಥ್ಯ ತೋರುವವಲ್ಲಿ ಅಧ್ಯಕ್ಷರು ವಿಫಲರಾಗಿದ್ದಾರೆ. ಜೆಸ್ಕಾಂ ಮತ್ತು ಪುರಸಭೆ ಕಚೇರಿ ಬಳಿ ಇರುವ ವಾಣಿಜ್ಯ ಮಳಿಗೆ ಬಾಡಿಗೆ ನೀಡುವುದಕ್ಕೆ ಟೆಂಡರ್ ಕರೆದಿಲ್ಲ. ಹಿಂದಿನ ಅವಧಿಯ ಕೆಲಸಗಳಿಗೆ ಭೂಮಿಪೂಜೆ ಮಾಡುವುದೇ ಅಧ್ಯಕ್ಷರ ಕೆಲಸವಾಗಿದೆ’ ಎಂದರು.
ಅವಿಶ್ವಾಸವಿಲ್ಲ: ‘ಪುರಸಭೆ ಅಧ್ಯಕ್ಷ ಖಾಜಾ ಮೈನುದ್ದೀನ್ ಮುಲ್ಲಾ ಅವರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ನೋಟಿಸ್ ನೀಡುವ ಪ್ರಶ್ನೆಯೇ ಉದ್ಭವಿಸಿಲ್ಲ, ಅಧ್ಯಕ್ಷರಾಗುವ ಸಂದರ್ಭದಲ್ಲಿ ಆಗಿರುವ ಒಪ್ಪಂದದಂತೆ 9 ತಿಂಗಳ ನಂತರ ರಾಜೀನಾಮೆ ನೀಡಿ ಬೇರೆಯವರಿಗೆ ಅವಕಾಶ ಮಾಡಿಕೊಡುತ್ತಾರೆಂಬ ನಿರೀಕ್ಷೆಯಲ್ಲಿದ್ದೇವೆ ಮತ್ತು ರಾಜೀನಾಮೆ ಕೊಡಿಸುವ ಜವಾಬ್ದಾರಿಯನ್ನು ಕೆಲ ಹಿರಿಯ ಸದಸ್ಯರೇ ವಹಿಸಿಕೊಂಡಿದ್ದಾರೆ’ ಎಂದು ಜಿಲಾನಿ ಮುಲ್ಲಾ ಮತ್ತು ಕಲ್ಲೇಶ ತಾಳದ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.