ADVERTISEMENT

ಆಲಮಟ್ಟಿ ಜಲಾಶಯದಿಂದ ನೀರು: ಮನವಿ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 13:17 IST
Last Updated 29 ಮಾರ್ಚ್ 2018, 13:17 IST

ಕೊಪ್ಪಳ: ಆಲಮಟ್ಟಿ ಜಲಾಶಯದಿಂದ ತುಂಗಭದ್ರಾ ಜಲಾಶಯಕ್ಕೆ ನೀರು ಹರಿಸುವ ಮೂಲಕ ಕೊಪ್ಪಳ ಭಾಗದ ಜನರ ನೀರಿನ ಬವಣೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೇಂದ್ರ ರಸ್ತೆ ಮತ್ತು ಜಲಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನವದೆಹಲಿಯಲ್ಲಿ ಮಂಗಳವಾರ ಸಂಸದ ಸಂಗಣ್ಣ ಕರಡಿ ಮನವಿ ಸಲ್ಲಿಸಿದ್ದಾರೆ.

'ತುಂಗಭದ್ರಾ ಜಲಾಶಯದ ಸಂಗ್ರಹ ಸಾಮರ್ಥ್ಯ 133 ಟಿಎಂಸಿ ಆಗಿದ್ದರೂ, ಹೂಳು ತುಂಬಿಕೊಂಡಿರುವುದರಿಂದ ಸಂಗ್ರಹ ಸಾಮರ್ಥ್ಯ 101 ಟಿಎಂಸಿಗೆ ಕುಸಿದಿದೆ. ಆದರೆ, ಹಲವಾರು ವರ್ಷಗಳ ಸರಾಸರಿ ನೋಡಿದರೆ, ಜಲಾಶಯದ ಶೇ 60ರಷ್ಟು ಭಾಗ ಮಾತ್ರ ಭರ್ತಿಯಾಗುತ್ತದೆ. ಶೇ 40ರಷ್ಟು, ಅಂದರೆ 40 ಟಿಎಂಸಿ ನೀರು ಈ ಭಾಗಕ್ಕೆ ಬರುವುದೇ ಇಲ್ಲ. ಜಲಾಶಯವನ್ನೇ ಕೃಷಿ ಮತ್ತು ಕುಡಿಯುವ ನೀರಿಗೆ ಅವಲಂಬಿಸಿರುವ ರಾಜ್ಯದ ಮೂರು ಜಿಲ್ಲೆಗಳು ಮತ್ತು ಆಂಧ್ರಪ್ರದೇಶದ ಒಂದು ಜಿಲ್ಲೆಯ ಜನ ಹಲವಾರು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ' ಎಂದು ಸಂಸದರು ಮನವಿಯಲ್ಲಿ ತಿಳಿಸಿದ್ದಾರೆ.

'ತುಂಗಭದ್ರಾ ನದಿಯಲ್ಲಿ ಮಳೆ ನೀರು ಹರಿವು ಹೆಚ್ಚುತ್ತಿಲ್ಲ. ಆದರೆ, ಕೃಷ್ಣಾ ನದಿಯಲ್ಲಿ ಪ್ರತಿ ವರ್ಷ ಮಹಾಪೂರ ಬರುತ್ತದೆ. ಆಲಮಟ್ಟಿ ಜಲಾಶಯ ಪ್ರತಿ ವರ್ಷ ಭರ್ತಿಯಾಗಿ, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತದೆ. ಆಲಮಟ್ಟಿ ಜಲಾಶಯದಿಂದ ಕಾಲುವೆಯೊಂದನ್ನು ತುಂಗಭದ್ರಾ ಜಲಾಶಯಕ್ಕೆ ಜೋಡಿಸುವ ಮೂಲಕ ಇವೆರಡೂ ಜಲಾಶಯಗಳು ಎದುರಿಸುವ ಸಮಸ್ಯೆ ಪರಿಹರಿಸಬಹುದು. ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿಯನ್ನೂ ಇದರಿಂದ ಸಮರ್ಥವಾಗಿ ತಡೆದಂತಾಗುತ್ತದೆ. ಅಲ್ಲದೆ ಇಲ್ಲಿನ ಜನರ ಸಮಸ್ಯೆಯೂ ಪರಿಹಾರವಾಗುತ್ತದೆ' ಎಂದು ಸಂಸದರು ತಿಳಿಸಿದ್ದಾರೆ.

ADVERTISEMENT

ಪ್ರವಾಹ ಕಾಲುವೆ ತುಂಗಭದ್ರಾ ನದಿಯ ಹಳ್ಳ ಮತ್ತು ಉಪನದಿಗಳನ್ನು ಹಾಯ್ದು ಹೋಗುವ ಕಡೆ ಸಮತೋಲನ ಜಲಾಶಯಗಳನ್ನು ನಿರ್ಮಿಸಬಹುದು. ಪ್ರತಿ ವರ್ಷ 40 ಟಿಎಂಸಿಗೂ ಹೆಚ್ಚು ನೀರನ್ನು ಈ ಮೂಲಕ ಪರಿಣಾಮಕಾರಿಯಾಗಿ ಬಳಸಬಹುದು ಎಂಬ ಅಂಶಕ್ಕೆ ಮನವಿಯಲ್ಲಿ ಒತ್ತು ನೀಡಿದ್ದಾರೆ.

ಮನವಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, 'ಇದು ಕ್ರಾಂತಿಕಾರಿ ವಿಚಾರವಾಗಿದ್ದು, ಇದನ್ನು ನದಿ ಜೋಡಣೆ ಯೋಜನೆಯ ಪ್ರಮುಖ ಭಾಗವಾಗಿ ಪರಿಗಣಿಸಬಹುದು. ಈ ಕುರಿತು ಪ್ರಧಾನಿ ಗಮನ ಸೆಳೆಯಲಾಗುವುದು' ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.