ADVERTISEMENT

ಎಚ್1ಎನ್1ಗೆ ಬಲಿ: ಕಾರ್ಯಕ್ಷಮತೆ ಮೆರೆದ ಇಲಾಖೆ

​ಪ್ರಜಾವಾಣಿ ವಾರ್ತೆ
Published 5 ಮೇ 2012, 5:55 IST
Last Updated 5 ಮೇ 2012, 5:55 IST

ಕಾರಟಗಿ:  ಕಳೆದ 20 ದಿನಗಳಿಂದ ಜ್ವರದಿಂದ ಬಳಲಿ, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಬೆಂಗಳೂರ ಅಪೊಲೋ ಆಸ್ಪತ್ರೆಯಲ್ಲಿ ಗುರುವಾರ ತಿಮ್ಮಾಪೂರ ಗ್ರಾಮದ ವೀರಭದ್ರಗೌಡ ನಿಧನರಾದ ವರದಿಯ ಹಿಂದೆಯೆ ಆರೋಗ್ಯ ಇಲಾಖೆ ಶುಕ್ರವಾರ ತ್ರಿವಳಿ ಗ್ರಾಮಗಳಾದ ಬೂದಗುಂಪಾ, ತಿಮ್ಮಾಪೂರ ಹಾಗೂ ಹಾಲಸಮುದ್ರ ಗ್ರಾಮಗಳಲ್ಲಿ ಅಗತ್ಯ ಮುಂಜಾಗರೂಕ ಕ್ರಮ ಕೈಗೊಂಡಿತು.

ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹಾದೇವಯ್ಯಸ್ವಾಮಿ, ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ. ಎಂ. ಎಂ. ಕಟ್ಟೀಮನಿ, ಗಂಗಾವತಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಿಜಯಾ ಕೆ. ಮೊದಲಾದವರು ತ್ರಿವಳಿ ಗ್ರಾಮಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು.

ಆರೋಗ್ಯ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಅವರು ಈಚಿನ ದಿನಗಳಲ್ಲಿ ಕೆಮ್ಮು, ದಮ್ಮು, ಜ್ವರದಿಂದ ಬಳಲುವವರ ಮಾಹಿತಿ ಸಂಗ್ರಹಿಸುವಂತೆ, ಅವರ ರಕ್ತ ಸಂಗ್ರಹಣೆ ಮಾಡುವಂತೆ ಸೂಚಿಸಿದರು.

ಬೂದಗುಂಪಾ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪ್ರವೀಣಕುಮಾರ್, ಆಯುಷ್ ವೈದ್ಯಾಧಿಕಾರಿ ಡಾ. ಇಮ್ತಿಯಾಜ್ ಅಹ್ಮದ್‌ರು ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಮೂರು ಗ್ರಾಮಗಲಲ್ಲಿ ಸಂಚರಿಸಿ 508 ಮನೆಗಳ ಜನರ ಮಾಹಿತಿ ಸಂಗ್ರಹಿಸಿದರು. ಗ್ರಾಮದ ಅನೇಕ ಗಣ್ಯರು ಸರ್ವೆ ಕಾರ್ಯಕ್ಕೆ ಸಹಕಾರ ನೀಡಿದರು. ಕೆಮ್ಮು ಮೊದಲಾದ ಭಾದೆಯಿಂದ ಬಳಲುವವರನ್ನು ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿದರು. 67 ಜನರ ರಕ್ತವನ್ನು ಸಂಗ್ರಹಿಸಲಾಗಿದ್ದು, ಪರೀಕ್ಷೆಗಾಗಿ ಕಳುಹಿಸಲಾಗುವುದು ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಎಚ್1ಎನ್1ಗೆ ಮೃತಪಟ್ಟ ವೀರಭದ್ರಪ್ಪರ ಪುತ್ರ ಮಂಜುನಾಥನ ಕಫವನ್ನು ಗುರುವಾರ ಸಂಗ್ರಹಿಸಲಾಗಿದೆ.
ಆರೋಗ್ಯ ಇಲಾಖೆ ಮುಂಜಾಗರೂಕ ಕ್ರಮಗಳನ್ನು ಕೈಗೊಂಡಿದ್ದು, ಜನರು ಇಲಾಖೆಯ ನೆರವು ಪಡೆಯಬೇಕು ಎಂದು ಇಲಾಖೆ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.