ADVERTISEMENT

ಕುಷ್ಟಗಿ: ಮನೆಯಂಗಳದಲ್ಲಿ ಸಾಹಿತ್ಯ ಸವಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 5:50 IST
Last Updated 5 ಅಕ್ಟೋಬರ್ 2012, 5:50 IST

ಕುಷ್ಟಗಿ:  ಕನ್ನಡ ಸಾಹಿತ್ಯ ಪರಿಷತ್ ಸ್ಥಳೀಯ ಘಟಕದ ವತಿಯಿಂದ ಮಂಗಳವಾರ ರಾತ್ರಿ ಕೃಷ್ಣಗಿರಿ ಕಾಲೊನಿಯಲ್ಲಿ ವೀರೇಶ ಬಂಗಾರಶೆಟ್ಟರ್ ಅವರ ಮನೆಯಲ್ಲಿ `ಮನೆ ಅಂಗಳದಲ್ಲಿ ಸಾಹಿತ್ಯ ಸವಿ~ ಕಾರ್ಯಕ್ರಮ ಹಮ್ಮಿ  ಕೊಳ್ಳಲಾಗಿತ್ತು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಪ್ರಗತಿ ಗ್ರಾಮೀಣ ಬ್ಯಾಂಕ್ ಹಿರೇವಂಕಲಕುಂಟಾ ಶಾಖೆ ವ್ಯವಸ್ಥಾಪಕ ಡಿ.ಆರ್.ಜ್ಯೋತಿ, ಕನ್ನಡ ಸಾಹಿತ್ಯ ಪರಂಪರೆ ಮತ್ತು ಬೆಳೆದು ಬಂದ ರೀತಿ, ರಾಮಾಯಣ, ಮಹಾಭಾರತ ಮೆಲುಕು ಹಾಕಿದರಲ್ಲದೇ ಕನ್ನಡ ಸಾಹಿತ್ಯಕ್ಕೆ ಗ್ರಾಮೀಣ ಪ್ರದೇಶದ ಕವಿ ಸಾಹಿತಿಗಳಿಂದ ಹಿಡಿದು, ರನ್ನ, ಜನ್ನ, ಪೊನ್ನ, ಪಂಪ, ಕುವೆಂಪು, ದ.ರಾ.ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿಯಂಥ ದಿಗ್ಗಜರ ಕೊಡುಗೆ ಅಪಾರವಾಗಿದ್ದು ಕನ್ನಡ ಸಾಹಿತ್ಯ ಸಮೃದ್ಧ ಮತ್ತು ಅಷ್ಟೇ ಶ್ರೀಮಂತವಾಗಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಜನಪದ ಕಲಾವಿದ ಶರಣಪ್ಪ ವಡಗೇರಿ, ಕನ್ನಡ ಸಾಹಿತ್ಯ ಸಾಹಿತ್ಯ ನಿಂತ ನೀರಾಗದೇ ಕೊನೆಯ ವ್ಯಕ್ತಿಯನ್ನು ತಲುಪಬೇಕು, ಅಂದರೆ ಮಾತ್ರ ಜಾಗೃತ ಸಮಾಜ ನಿರ್ಮಾಣಕ್ಕೆ ಸಾಧ್ಯವಾಗುತ್ತದೆ, ಮೊಬೈಲ್ ಮತ್ತು ದೃಶ್ಯ ಮಾಧ್ಯಮಗಳ ಹಾವಳಿಯಿಂದ ಸಾಹಿತ್ಯ ರಚನೆ ಮತ್ತು ಓದುವ ಅಭಿರುಚಿ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.

ಅತಿಥಿಯಾಗಿದ್ದ ಸಾಹಿತಿ ಪ್ರಮೋದ ತುರ್ವಿಹಾಳ, ಮಾನವ ಪ್ರೀತಿ ಮತ್ತು ಜನಪರ ಕಾಳಜಿ ಸಾಹಿತ್ಯದ ಮೂಲ ಆಶಯವಾಗಿದೆ, ಎಲ್ಲಿಯೋ ಕುಳಿತು ಬರೆಯುವುದಕ್ಕಿಂತ ಜನ ಸಮುದಾಯದ ಹತ್ತಿರ ಹೋಗಿ, ವಾಸ್ತವಿಕತೆಯನ್ನು ದಾಖಲಿಸಿದಾಗ ಮಾತ್ರ ನಿಜವಾದ ಸಾಹಿತ್ಯ ರಚನೆಯಾಗುತ್ತದೆ. ಅಲ್ಲದೇ ಸಾಹಿತ್ಯ ರಚನೆ ಬಹುಮುಖಿ ಆಲೋಚನೆಯಿಂದ ಕೂಡಿರಬೇಕು ಎಂದು ಹೇಳಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೀರಪ್ಪ ನಿಂಗೋಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಶಾಸಕ ಕೆ.ಶರಣಪ್ಪ, ಪ್ರಮುಖರಾದ ದೇವೇಂದ್ರಪ್ಪ ಬಳೂಟಗಿ, ಬಸವರಾಜ ಕೆಂಚರೆಡ್ಡಿ, ವಿ.ಬಿ.ಆಶ್ರೀತ್, ಕಸಾಪ ಅಧ್ಯಕ್ಷ ಚಂದಪ್ಪ ಹಕ್ಕಿ, ಮಾಜಿ ಅಧ್ಯಕ್ಷ ಶ್ರೀನಿವಾಸ ಜಹಗೀರದಾರ, ರವೀಂದ್ರ ಬಾಕಳೆ, ಎಸ್.ಎಸ್.ಅರಳಿ, ಆರ್.ಎನ್.ಸರಗಣಾಚಾರಿಮಠ, ಅಮರೇಗೌಡ, ರಾಜಶೇಖರ ಇತರರು ಇದ್ದರು.

ಆತಿಥ್ಯ ನೀಡಿದ್ದ ವೀರೇಶ ಬಂಗಾರಶೆಟ್ಟರ್ ಸ್ವಾಗತಿಸಿದರು. ಶಿಕ್ಷಕ ಕುಮಾರಸ್ವಾಮಿ ಹಿರೇಮಠ ನಿರೂಪಿಸಿದರು. ಮಹಾಂತೇಶ ಚೌಡಾಪೂರ ವಂದಿಸಿದರು. ಪಟ್ಟಣ ಹಾಗೂ ವಿವಿಧ ಊರುಗಳ ಸಾಹಿತ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.