ADVERTISEMENT

`ಕೈ'ವಶಕ್ಕೆ ಸಹೋದರ ಕದನ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 9:33 IST
Last Updated 8 ಏಪ್ರಿಲ್ 2013, 9:33 IST
ದಢೇಸ್ಗೂರು ನಿದ್ದೆ....
ದಢೇಸ್ಗೂರು ನಿದ್ದೆ....   

ಗಂಗಾವತಿ: ಜಿಲ್ಲೆಯ ರಾಜಕೀಯ ಶಕ್ತಿಕೇಂದ್ರ ಎಂದು ಬಿಂಬಿತವಾಗಿರುವ `ಗಂಗಾವತಿ ಮತಕ್ಷೇತ್ರ'ದಲ್ಲಿ ಜೆಡಿಎಸ್, ಬಿಜೆಪಿ ಮತ್ತು ಕೆಜೆಪಿ ಪಕ್ಷಗಳು ಈಗಾಗಲೆ ಕಣಕ್ಕಿಳಿಯಲಿರುವ ತಮ್ಮ ಹುರಿಯಾಳುಗಳು ಯಾರು ಎಂಬುವುದನ್ನು ಘೋಷಣೆ ಮಾಡಿವೆ.

ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಅಖೈರುಗೊಳಿಸುವಲ್ಲಿ ಕಾಂಗ್ರೆಸ್ಸಿಗೆ ಇನ್ನೂ ಸಾಧ್ಯವಾಗಿಲ್ಲ. ಕಾಂಗ್ರೆಸ್‌ನ ಹುರಿಯಾಳು ಯಾರು ಎನ್ನುವುರ ಮೇಲೆ ಕ್ಷೇತ್ರದ ಚುನಾವಣಾ ಕಣ ರಂಗೇರುವ ಸಾಧ್ಯತೆಯಿದೆ.

ಸಹೋದರರ ಸವಾಲ್:
ಈ ಮಧ್ಯೆ ಗಂಗಾವತಿ ಮತಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಬಯಸಿ ಮಾಜಿ ಸಂಸದ ಕಾಂಗ್ರೆಸ್ಸಿನ ಹಿರಿಯ ಮುಖಂಡ ಎಚ್.ಜಿ. ರಾಮುಲು ಅವರ ಒಂದೇ ಕುಟುಂಬದ ಇಬ್ಬರು ಸಹೋದರರ ಮಧ್ಯೆ ತೀವ್ರ ಜಿದ್ದಾಜಿದ್ದು ಏರ್ಪಟ್ಟಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಟಿಕೆಟ್‌ಗಾಗಿ ಮಾಜಿ ಎಂಎಲ್‌ಸಿ ಎಚ್.ಆರ್. ಶ್ರೀನಾಥ ಮತ್ತು ಅವರ ಸಹೋದರ ಉದ್ಯಮಿ ಎಚ್.ಆರ್. ಚನ್ನಕೇಶವರ ಮಧ್ಯೆ ತೀವ್ರ ಜಿದ್ದು ಏರ್ಪಟ್ಟಿದೆ. ಪರಿಣಾಮ ಕಾಂಗ್ರೆಸ್ಸಿಗೆ ಗಂಗಾವತಿ ಕ್ಷೇತ್ರದ ಟಿಕೆಟ್ ಅಂತಿಮಗೊಳಿಸಲು ಸಾಧ್ಯವಾಗಿಲ್ಲ.

ಈ ಮಧ್ಯೆ ಉಯರು ತಮಗಿರುವ ಶಕ್ತಿ ಸಾಮರ್ಥ್ಯಗಳನ್ನು ತೋರಿಸಲು ದೆಹಲಿಯ ಹೈಕಮಾಂಡಿನ ಅಂಗಳವನ್ನು ವೇದಿಕೆಯನ್ನಾಗಿಸಿಕೊಂಡಿದ್ದಾರೆ. ಘಟಾನುಘಟಿಗಳ ಒತ್ತಡ, ರಾಜಕೀಯ ಶಿಫಾರಸ್ಸಿನೊಂದಿಗೆ ಉಭಯರು ಕಳೆದೊಂದು ವಾರದಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.

ರಾಜಕೀಯ ಲೆಕ್ಕಾಚಾರ:
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ- ಜೆಡಿಎಸ್, ಶಾಸಕ ಪರಣ್ಣ ಮುನವಳ್ಳಿ- ಬಿಜೆಪಿ ಹಾಗೂ ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಅನ್ವರಿ ಕೆಜೆಪಿಯ ಅಧಿಕೃತ ಅಭ್ಯರ್ಥಿಗಳು ಎಂದು ಈಗಾಗಲೆ ಆಯಾ ಪಕ್ಷಗಳು ಘೋಷಣೆ ಮಾಡಿವೆ.

ಚನ್ನಕೇಶವ ಮತ್ತು ಶ್ರೀನಾಥರ ಈ ಇಬ್ಬರ ಪೈಕಿ ಕಾಂಗ್ರೆಸ್ಸಿನ ಅಭ್ಯರ್ಥಿ ಯಾರಾದರೆ ತಮಗೆ ಹೆಚ್ಚು ಅನುಕೂಲ, ಅನಾನುಕೂಲ ಎಂಬುವುದರ ಬಗ್ಗೆ ಮಿಕ್ಕ ಪಕ್ಷಗಳ ಅಭ್ಯರ್ಥಿಗಳು ಮತ ಎಣಿಕೆಯ ಲೆಕ್ಕಚಾರದಲ್ಲಿ ಮುಳಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.