ADVERTISEMENT

ಗಂಗಾವತಿಯತ್ತ ಮುಖ ಮಾಡಿದ ಹೊಸಪೇಟೆ ಶಾಸಕ ಆನಂದ್‌ ಸಿಂಗ್?

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 9:05 IST
Last Updated 5 ಅಕ್ಟೋಬರ್ 2017, 9:05 IST

ಗಂಗಾವತಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಗದ್ದುಗೆ ಏರಲು ಅತ್ತ ಕಾಂಗ್ರೆಸ್, ಇತ್ತ ಬಿಜೆಪಿ ನಾಯಕರು ರಣ ತಂತ್ರ ಹೆಣೆಯುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಸಾಕಷ್ಟು ಮುಖಂಡರು ತಮ್ಮ ಕ್ಷೇತ್ರಗಳನ್ನು ಬದಲಿಸುತ್ತಿದ್ದಾರೆ. ಇದಕ್ಕೆ ನೆರೆ ಹೊರೆಯ ಜಿಲ್ಲೆಯ ನಾಯಕರು ಹೊರತಲ್ಲ ಎಂಬುವುದು ಈಗ ಗಂಗಾವತಿಯತ್ತ ಮುಖ ಮಾಡಿರುವ ಮುಖಂಡರಿಂದ ವೇದ್ಯವಾಗುತ್ತಿದೆ.

ಹೊಸಪೇಟೆಯ ಹಾಲಿ ಬಿಜೆಪಿ ಶಾಸಕ ಆನಂದ್‌ ಸಿಂಗ್ ಕೂಡ ಸುರಕ್ಷಿತ ಕ್ಷೇತ್ರ ಹುಡುಕುವಲ್ಲಿ ತಲ್ಲೀನರಾಗಿದ್ದು, ಗಂಗಾವತಿಯತ್ತ ಮುಖ ಮಾಡಲು ಕಾರಣ ಎನ್ನಲಾಗುತ್ತಿದೆ.

ಕಳೆದ ಒಂದುವರೆ ದಶಕದಿಂದ ಗಂಗಾವತಿಯೊಂದಿಗೆ ನಂಟು ಇಟ್ಟುಕೊಂಡಿರುವ ಶಾಸಕ ಆನಂದ್ ಸಿಂಗ್, ಇಲ್ಲಿನ ಕರ್ನೂಲುಬಾಬಾ ದರ್ಗಾಕ್ಕೆ ಆಗಾಗ ಭೇಟಿ ನೀಡಿ, ದೇಣಿಗೆ ಸಲ್ಲಿಸಿದ್ದಾರೆ. ಅಲ್ಲದೇ ಮಲ್ಲಾಪುರದ ಕುಟುಂಬವೊಂದಕ್ಕೆ ಪ್ರತಿ ವರ್ಷ ಸಹಾಯ ಮಾಡುವ ಮೂಲಕ ಕ್ಷೇತ್ರದೊಂದಿಗೆ ನಂಟಿಟ್ಟುಕೊಂಡಿದ್ದಾರೆ. ಆದರೆ ಬದಲಾಗುತ್ತಿರುವ ರಾಜಕೀಯ ವಿದ್ಯಾಮನಗಳಲ್ಲಿ ಆನಂದ್‌ ಸಿಂಗ್‌ ಅವರಿಗೆ ಹೊಸಪೇಟೆಯಲ್ಲಿ ಅನುಕೂಲಕರ ವಾತಾವರಣ ಇಲ್ಲ ಎನ್ನಲಾಗುತ್ತಿದ್ದು, ಗಂಗಾವತಿಯತ್ತ ಮುಖ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ಎನ್ನುವಂತೆ ಗಂಗಾವತಿಯ ತಂಡವೊಂದು ಆನಂದ್‌ ಸಿಂಗ್ ಅವರನ್ನು ಭೇಟಿ ಮಾಡಿ ಆಹ್ವಾನ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ADVERTISEMENT

ಈ ಬಗ್ಗೆ ಪ್ರಜಾವಾಣಿ ದೂರವಾಣಿ ಮೂಲಕ ಆನಂದ್ ಸಿಂಗ್ ಅವರನ್ನು ಸಂಪರ್ಕಿಸಿದಾಗ, ಹೊಸಪೇಟೆಯಿಂದ ಕ್ಷೇತ್ರ ಬದಲಿಸಿ ಗಂಗಾವತಿಯತ್ತ ಬರುತ್ತಿರುವ ಸುದ್ದಿಯನ್ನು ಅವರು ನಿರಾಕರಿಸಲಿಲ್ಲ. ಶೀಘ್ರದಲ್ಲಿ ಈ ಬಗ್ಗೆ ನಿರ್ಣಯ ಪ್ರಕಟಿಸಲಿರುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.