ADVERTISEMENT

ಜೆಡಿಎಸ್‌ನತ್ತ ಮಾಜಿ ಶಾಸಕನ ಚಿತ್ತ

ಹಸನ್‌ಸಾಬ್‌ಗೆ ದೇವೇಗೌಡರ ಆಹ್ವಾನ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 12:33 IST
Last Updated 23 ಮಾರ್ಚ್ 2014, 12:33 IST

ಕುಷ್ಟಗಿ: ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುವಂತೆ ಕಾಂಗ್ರೆಸ್ ಪಕ್ಷದ ಇಲ್ಲಿಯ ಮಾಜಿ ಶಾಸಕ ಹಸನ್‌ಸಾಬ್‌ ದೋಟಿಹಾಳ ಅವರಿಗೆ ಜೆಡಿಎಸ್‌ ಆಹ್ವಾನ ನೀಡಿರುವುದು ಮತ್ತು ಈ ನಿಟ್ಟಿನಲ್ಲಿ ಹಸನ್‌ಸಾಬ್‌ ಚಿತ್ತ ಹರಿಸಿರುವುದು ತಿಳಿದುಬಂದಿದೆ.

ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಮತ್ತು ತಮ್ಮ ನಡುವಿನ ಸಂಬಂಧ ಸುಧಾರಿಸ­ದಷ್ಟು ಬೆಳವಣಿಗೆ ಹೊಂದಿರುವ ಹಿನ್ನೆಲೆಯಲ್ಲಿ ಪರ್ಯಾಯ ಪಕ್ಷದತ್ತ ಮುಖಮಾಡಿರುವ ಹಸನ್‌ಸಾಬ್‌ ಅವರಿಗೆ ಗಾಳ ಹಾಕಿರುವ  ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಶನಿವಾರ ಸ್ವತಃ ಕರೆ ಮಾಡಿ ಆಹ್ವಾನ ನೀಡಿದ್ದಾರೆ. ಅಲ್ಲದೇ ಜೆಡಿಎಸ್‌ ಸೇರುತ್ತಿರುವ ಜಾಫರ್‌ ಷರೀಫ್‌ ಸಹ ಹಸನ್‌ಸಾಬ್‌ ಅವರೊಂದಿಗೆ ಚರ್ಚಿಸಿ­ದ್ದಾರೆ ಎಂದು ತಿಳಿದು ಬಂದಿದೆ.

ಈ ವಿಷಯವನ್ನು ‘ಪ್ರಜಾವಾಣಿ’ಗೆ ಖಚಿತ ಪಡಿಸಿದ ಹಸನ್‌ಸಾಬ್‌, ಆಹ್ವಾನ ಬಂದಿದ್ದು ನಿಜ, ಅಭಿಮಾನಿ­ಗಳಿಂದಲೂ ಒತ್ತಡವಿದ್ದು ಈ ಕುರಿತು ಮಾ. 25ರೊಳಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದಾಗಿ  ತಿಳಿಸಿದ್ದಾರೆ.

ಈ ಮಧ್ಯೆ ಮಾ.23ರಂದು ಇಲ್ಲಿ ನಡೆಯಲಿರುವ ಕಾಂಗ್ರೆಸ್‌ ಪಕ್ಷದ ಚುನಾವಣಾ ಸಭೆಯಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ಹಸನ್‌­ಸಾಬ್‌ ತಿಳಿಸಿದ್ದಾರೆ.

ನಾಲ್ಕು ಜನ ಕಾರ್ಯರ್ತರಿಂದ ಕೂಗು ಹಾಕಿಸು­ವುದು ದೊಡ್ಡ ಸಂಗತಿ ಅಲ್ಲ. ಆದರೆ ಅಂಥ ಕೀಳುಮಟ್ಟದ ರಾಜಕಾರಣ ಮಾಡುವುದಿಲ್ಲ. ನಮ್ಮಿಂದ ಅಭ್ಯರ್ಥಿ ಬಸವರಾಜ ಹಿಟ್ನಾಳ ಅವರಿಗೆ ತೊಂದರೆಯಾ­ಗಬಾರದು ಎಂಬ ಕಾರಣಕ್ಕೆ ಸಭೆಯಲ್ಲಿ ಪಾಲ್ಗೊಳ್ಳು­ವುದಿಲ್ಲ. ಸಭೆಗೆ ಆಹ್ವಾನ ನೀಡಿದ ಸಚಿವ ಶಿವರಾಜ ತಂಗಡಗಿ ಮತ್ತು ಬಸವ­ರಾಜ ಹಿಟ್ನಾಳ ಅವರಿಗೆ ವಿವರಿಸಿರು­ವುದಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.