ಕುಷ್ಟಗಿ: ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುವಂತೆ ಕಾಂಗ್ರೆಸ್ ಪಕ್ಷದ ಇಲ್ಲಿಯ ಮಾಜಿ ಶಾಸಕ ಹಸನ್ಸಾಬ್ ದೋಟಿಹಾಳ ಅವರಿಗೆ ಜೆಡಿಎಸ್ ಆಹ್ವಾನ ನೀಡಿರುವುದು ಮತ್ತು ಈ ನಿಟ್ಟಿನಲ್ಲಿ ಹಸನ್ಸಾಬ್ ಚಿತ್ತ ಹರಿಸಿರುವುದು ತಿಳಿದುಬಂದಿದೆ.
ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಮತ್ತು ತಮ್ಮ ನಡುವಿನ ಸಂಬಂಧ ಸುಧಾರಿಸದಷ್ಟು ಬೆಳವಣಿಗೆ ಹೊಂದಿರುವ ಹಿನ್ನೆಲೆಯಲ್ಲಿ ಪರ್ಯಾಯ ಪಕ್ಷದತ್ತ ಮುಖಮಾಡಿರುವ ಹಸನ್ಸಾಬ್ ಅವರಿಗೆ ಗಾಳ ಹಾಕಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಶನಿವಾರ ಸ್ವತಃ ಕರೆ ಮಾಡಿ ಆಹ್ವಾನ ನೀಡಿದ್ದಾರೆ. ಅಲ್ಲದೇ ಜೆಡಿಎಸ್ ಸೇರುತ್ತಿರುವ ಜಾಫರ್ ಷರೀಫ್ ಸಹ ಹಸನ್ಸಾಬ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ವಿಷಯವನ್ನು ‘ಪ್ರಜಾವಾಣಿ’ಗೆ ಖಚಿತ ಪಡಿಸಿದ ಹಸನ್ಸಾಬ್, ಆಹ್ವಾನ ಬಂದಿದ್ದು ನಿಜ, ಅಭಿಮಾನಿಗಳಿಂದಲೂ ಒತ್ತಡವಿದ್ದು ಈ ಕುರಿತು ಮಾ. 25ರೊಳಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಈ ಮಧ್ಯೆ ಮಾ.23ರಂದು ಇಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಚುನಾವಣಾ ಸಭೆಯಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ಹಸನ್ಸಾಬ್ ತಿಳಿಸಿದ್ದಾರೆ.
ನಾಲ್ಕು ಜನ ಕಾರ್ಯರ್ತರಿಂದ ಕೂಗು ಹಾಕಿಸುವುದು ದೊಡ್ಡ ಸಂಗತಿ ಅಲ್ಲ. ಆದರೆ ಅಂಥ ಕೀಳುಮಟ್ಟದ ರಾಜಕಾರಣ ಮಾಡುವುದಿಲ್ಲ. ನಮ್ಮಿಂದ ಅಭ್ಯರ್ಥಿ ಬಸವರಾಜ ಹಿಟ್ನಾಳ ಅವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಸಭೆಗೆ ಆಹ್ವಾನ ನೀಡಿದ ಸಚಿವ ಶಿವರಾಜ ತಂಗಡಗಿ ಮತ್ತು ಬಸವರಾಜ ಹಿಟ್ನಾಳ ಅವರಿಗೆ ವಿವರಿಸಿರುವುದಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.