ಕೊಪ್ಪಳ: ವಿದ್ಯುತ್ ಪರಿವರ್ತಕ ಕೆಟ್ಟಿದೆ ಎಂದು ತಪ್ಪು ಮಾಹಿತಿ ನೀಡಿದ ಲೈನ್ಮನ್ಗಳ ವಿರುದ್ಧ ತಾಲ್ಲೂಕಿನ ಟನಕನಕಲ್ ಗ್ರಾಮದ ರೈತರು ಸೋಮವಾರ ಇಲ್ಲಿನ ಜೆಸ್ಕಾಂ ಕಚೇರಿ ಎದುರು ಟ್ರಾನ್ಸ್ ಫಾರ್ಮರ್ ಸಹಿತ ಆಗಮಿಸಿ ಪ್ರತಿಭಟನೆ ನಡೆಸಿದರು.
ಗ್ರಾಮದ ವ್ಯಾಪ್ತಿಯಲ್ಲಿ ಟ್ರಾನ್ಸ್ಫಾರ್ಮರ್ ಕೆಟ್ಟಿದೆ ಎಂದು ಹೇಳಿ ರೈತರಿಂದ ಹಣ ಸುಲಿಯುತ್ತಿದ್ದಾರೆ. ಮೂವರು ಲೈನ್ಮನ್ಗಳು ಈ ದಂಧೆಯಲ್ಲಿ ನಿರತರಾಗಿದ್ದಾರೆ. ಎಷ್ಟೋ ಬಾರಿ ಸರಿಯಿದ್ದ ಟ್ರಾನ್ಸ್ಫಾರ್ಮರ್ನ್ನು ತೆಗೆಸಿ ದುರಸ್ತಿ ಹೆಸರಿನಲ್ಲಿ ಹಣ ವಸೂಲಿ ಮಾಡಿದ್ದಾರೆ. ಇದಕ್ಕೆ ವೀರಾಪುರ ಗ್ರಾಮದಲ್ಲಿ ಟಿಸಿ ದುರಸ್ತಿ ಮಾಡುವವನ ಕುಮ್ಮಕ್ಕೂ ಇದೆ ಎಂದು ಆರೋಪಿಸಿದರು.
ಟನಕನಕಲ್ ಗ್ರಾಮದ ರೈತರು ಇದರಿಂದಾಗಿ ಸಾವಿರಾರು ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಕೂಡಲೇ ಇಂಥ ಲೈನ್ಮನ್ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿ ಕಾರ್ಯನಿರ್ವಾಹಕ ಎಂಜಿನಿಯರ್ಗೆ ಮನವಿ ಸಲ್ಲಿಸಿದರು.
ರೈತಮುಖಂಡರಾದ ಕಲ್ಲಪ್ಪ ಹೂಗಾರ, ರಾಜು ಮಲಕಟ್ಟೆ, ನೀಲಪ್ಪ ಅರಳಿಗಿಡ, ಮಲ್ಲಪ್ಪ, ಮೈಲಾರಪ್ಪ ಶಾನಭೋಗ, ಮಂಜಪ್ಪ ಇಟ್ಟಂಗಿ, ಗವಿಸಿದ್ದಪ್ಪ ಈಶ್ವರಗೌಡ್ರ, ಕಲ್ಲಪ್ಪ ಹೂಗಾರ, ಸಿದ್ದಪ್ಪ ಹದ್ದಿನ, ಮಂಜುನಾಥ ಅಬಕಾರಿ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.