ಕುಷ್ಟಗಿ: ಅಶುದ್ಧ ಕುಡಿಯುವ ನೀರು ಕುಡಿದು ವಾಂತಿಭೇದಿಗೀಡಾಗಿದ್ದ ತಾಲ್ಲೂಕಿನ ತೊಣಸಿಹಾಳ ಮತ್ತು ಅಲ್ಲಿನ ತಾಂಡಾದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಆನಂದ ಗೋಟೂರು ತಿಳಿಸಿದ್ದಾರೆ.
ಆದರೆ ಬುಧವಾರ ಸಂಜೆವರೆಗೆ ಮತ್ತೆ ಐದು ಹೊಸ ಪ್ರಕರಣಗಳು ವರದಿಯಾಗಿದ್ದು ಅವರಿಗೆ ದೋಟಿಹಾಳ ಮತ್ತು ಕುಷ್ಟಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಘಟನೆಯ ಹಿನ್ನೆಲೆಯಲ್ಲಿ ಗ್ರಾಮ ಮತ್ತು ದೋಟಿಹಾಳ, ಕುಷ್ಟಗಿ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿದ
ಶಾಸಕ ಅಮರೇಗೌಡ ಬಯ್ಯಾಪೂರ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಲು ಸೂಚಿಸಿದರು. ಆದರೆ ಕೆಲ ರೋಗಿಗಳು ಅರ್ಧ ಗುಣಮುಖರಾಗುತ್ತಿದ್ದಂತೆ ಜಾಗ ಖಾಲಿ ಮಾಡುತ್ತಾರೆ, ಮತ್ತೆ ರೋಗ ಉಲ್ಬಣಿಸಿ ಆಸ್ಪತ್ರೆ ಸೇರುವಂತಾಗಿದೆ ಎಂಬುದನ್ನು ಸ್ಥಳದಲ್ಲಿದ್ದ ಸರ್ಕಾರಿ ವೈದ್ಯ ಡಾ.ಚಂದ್ರಶೇಖರ ದಂಡಿ ಶಾಸಕರಿಗೆ ವಿವರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಯ್ಯಾಪೂರ, ಕುಡಿಯುವ ನೀರಿನ ವಿಷಯದಲ್ಲಿ
ಗ್ರಾ.ಪಂಗಳು ನಿರ್ಲಕ್ಷ್ಯವಹಿಸಿರುವುದು ನಿಜ, ಆದರೆ ಗ್ರಾಮದಲ್ಲಿದ್ದು ಇಂಥ ಕೆಲಸಕಾರ್ಯಗಳನ್ನು ನೋಡಿಕೊಳ್ಳುವುದಕ್ಕೆ ಗ್ರಾ.ಪಂ ಸಿಬ್ಬಂದಿಗೆ ನೆರವಾಗುವುದಿಲ್ಲ.
ಬದಲಾಗಿ ಉದ್ಯೋಗ ಖಾತರಿ ಇತರೆ ವಿಷಯಗಳಲ್ಲಿ ಅವರ ಮೇಲೆ ಮುಗಿ ಬಿದ್ದು ಅವರ ಅಂಗಿ ಹರಿಯುತ್ತಾರೆ.
ಅದರಿಂದ ಸಿಬ್ಬಂದಿ ಗ್ರಾಮಗಳಿಗೆ ಹೋಗಲು ಹಿಂಜರಿಯುತ್ತಾರೆ ಎಂದರು. ಹಾಗಂತ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮರೆಯಬಾರದು ಎಂದೂ ಶಾಸಕರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.