ADVERTISEMENT

ದುರ್ನಾತ: ಮೂಗು ಮುಚ್ಚಿಕೊಳ್ಳುವುದು ಕಡ್ಡಾಯ!

​ಪ್ರಜಾವಾಣಿ ವಾರ್ತೆ
Published 22 ಜೂನ್ 2011, 7:05 IST
Last Updated 22 ಜೂನ್ 2011, 7:05 IST

ಕಾರಟಗಿ: ಸುತ್ತಲೂ ಮುಳ್ಳಿನ ಗಿಡಗಳು, ಎಲ್ಲೆಡೆಯೂ ಕಸದ ರಾಸಿ, ಇರುವ ಶೌಚಾಲಯದ ಹೊಲಸೆಲ್ಲಾ ಕೆಳಗೆ ಹರಡಿರುವುದು, ಇದರ ಸ್ವಚ್ಛತೆಗೆ ಬರುವ ಹಂದಿಗಳ ಹಿಂಡು, ಶೌಚಾಲಯಕ್ಕೆ ತೆರಳುವ ಮಹಿಳೆಯರು ಹಾಗೂ ಈ ಮಾರ್ಗವಾಗಿ ಓಡಾಡುವವರು ಕಡ್ಡಾಯವಾಗಿ ಮೂಗು ಮುಚ್ಚಿಕೊಂಡೇ ಕೆಲ ನಿಮಿಷ ಕಳೆಯಬೇಕು.

ನಾಗರಿಕ ಸಮಾಜ ತಲೆತಗ್ಗಿಸುವಂತ ವಾತಾವರಣ ಇರುವುದು ಕೊಪ್ಪಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ, ತಾಲ್ಲೂಕು ಪಂಚಾಯಿತಿ ಸದಸ್ಯೆ ವಾಸಿಸುವ, ಸುಧಾರಿಸಿದ ಹಾಗೂ ಸುಶಿಕ್ಷಿತರ ಬಡಾವಣೆ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಜೆಪಿ ನಗರದ ಹೃದಯ ಭಾಗದಲ್ಲಿ.

ಭೂ ಮಾಲೀಕರು ಭೂ ಪರಿವರ್ತನೆಯ ಸಮಯದಲ್ಲಿ ಶಾಲೆ, ಮಹಿಳಾ ಶೌಚಾಲಯಕ್ಕೆ ಆಗಿನ ಮಂಡಲ ಪಂಚಾಯಿತಿಗೆ ನಿವೇಶನಗಳನ್ನು ದಾನ ನೀಡಿದ್ದರು. ಒಂದು ನಿವೇಶನದಲ್ಲಿ ಮಹಿಳಾ ಶೌಚಾಲಯ ನಿರ್ಮಿಸಲಾಗಿದೆ. ಆಗ ಈ ಭಾಗದಲ್ಲಿ ವಿರಳವಾಗಿದ್ದರೆ, ಈಗ ಜನನಿಬಿಡ ಪ್ರದೇಶವಾಗಿ ಪರಿವರ್ತನೆಯಾಗಿದೆ.
 
ಶೌಚಾಲಯದ ಪಕ್ಕದಲ್ಲಿ ಇನ್ನೊಂದು ನಿವೇಶನವಿದ್ದರೂ ಶಾಚಾಲಯಕ್ಕೆ ಫಿಟ್ ತಗೆದಿಲ್ಲ. ಬಯಲಲ್ಲಿಯ ಪರಿಸರವನ್ನು ಹಂದಿಗಳೆ ಸ್ವಚ್ಛಗೊಳಿಸಬೇಕಾದ ಪರಿಸ್ಥಿತಿ ಇಲ್ಲಿದೆ. ಅಕ್ಕ ಪಕ್ಕದಲ್ಲೇ ಜನರು ವಾಸಿಸುತ್ತಿದ್ದರೆ. ಮುಂದೆ ಸರ್ಕಾರಿ ಕಾಲೇಜ್ ಇದೆ. ಇವರು ಹಾಗೂ ಈ ಮಾರ್ಗವಾಗಿ ಸಂಚರಿಸುವವರು ದುರ್ನಾತದ ಸೇವನೆ ಮಾಡಲೇಕಾದ ದಯನೀಯ ಪರಿಸ್ಥಿತಿ ಇಲ್ಲಿದೆ.

ಈ ಶೌಚಾಲಯದ ಸ್ಥಳಾಂತರಕ್ಕೆ ಕೊಟ್ಟ ಮನವಿಗಳು, ಜನರ ಒತ್ತಾಯಕ್ಕೆ ಜನಪ್ರತಿನಿಧಿಗಳ ಸ್ಪಂದನೆಯೆ ಇಲ್ಲದಾಗಿದೆ. ಒತ್ತಾಯಿಸಿದ ನಾಗರಿಕರು, ಮಹಿಳೆಯರು ತಮ್ಮ ಪ್ರಯತ್ನ ವ್ಯರ್ಥವಾಗಿರುವುದಕ್ಕೆ ಅಸಹಾಯಕರಾಗಿ ಮೌನಕ್ಕೆ ಶರಣಾಗಿದ್ದಾರೆ.

ಶೌಚಾಲಯಕ್ಕೆಂದು ಇನ್ನೊಂದು ನಿವೇಶನ ಇದೆ. ಅದರಲ್ಲಿ ಶೌಚಾಲಯದ ಫಿಟ್ ಮಾಡಿಸಿದರೆ ತಾತ್ಕಾಲಿಕವಾಗಿ ದುರ್ನಾತದ ಸಮಸ್ಯೆಯನ್ನು ನಿವಾರಿಸಬಹುದಾಗಿದೆ ಎಂಬ ಸಲಹೆಯನ್ನು ನಿವೃತ್ತ ಅಧಿಕಾರಿ ರಬ್ಬನಗೌಡರು ನೀಡಿದ್ದಾರೆ.

ನಾಗರಿಕರು ವಾಸಿಸಲು ಪೂರಕ ವಾತಾವರಣವೇ ಇರದಿರುವುದಕ್ಕೆ ಶೌಚಾಲಯ ಕಾರಣವಾಗಿದ್ದು, ಈ ಸಮಸ್ಯೆಯತ್ತ  ಜನಪ್ರತಿನಿಧಿಗಳು ಗಮನಹರಿಸಿ ತಮ್ಮ ಕಳಕಳಿಯನ್ನು ತೋರಿಸಲು ಮುಂದಾಗಬೇಕಿದೆ ಎಂದು ಆ ಭಾಗದ ನಾಗರಿಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.