ADVERTISEMENT

ನೀರಿಗಾಗಿ ಗಾಂಧಿನಗರ ಜನತೆ ಪರದಾಟ!

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 8:35 IST
Last Updated 15 ಅಕ್ಟೋಬರ್ 2012, 8:35 IST

ಕುಷ್ಟಗಿ: ಪಟ್ಟಣದ 15ನೇ ವಾರ್ಡಿಗೆ ಸೇರಿದ ಗಾಂಧಿನಗರದಲ್ಲಿ ಕುಡಿಯುವ ನೀರು ಪೂರೈಕೆಯಾಗದೇ ಅಲ್ಲಿನ ತೊಂದರೆಗೆ ಒಳಗಾಗಿರುವುದು ಕಂಡುಬಂದಿದೆ.

ತಹಶೀಲ್ದಾರರ ಕಚೇರಿ ಸೇರಿದಂತೆ ಹತ್ತಾರು ಸರ್ಕಾರಿ ಇಲಾಖೆಗಳನ್ನು ಒಳಗೊಂಡ ಮಿನಿ ವಿಧಾನಸೌಧಕ್ಕೆ ಹೊಂದಿಕೊಂಡಿರುವ ಈ ಪ್ರದೇಶದ ಜನತೆ ಕುಡಿಯುವ ನೀರಿಗಾಗಿ ಪಡುತ್ತಿರುವ ಗೋಳು ಈ ಸೌಧದಲ್ಲಿದ್ದವರಿಗೆ ಕೇಳಿಸಿಲ್ಲ. ಪುರಸಭೆ ಸಹ ಈ ಸಮಸ್ಯೆ ಪರಿಹಾರಕ್ಕೆ ಯತ್ನಿಸದಿರುವುದು ಕಂಡುಬಂದಿದೆ.

ಒಂದು ಕಿಮೀ ದೂರದ ಗ್ರಾನೈಟ್ ಕಂಪೆನಿಯವರಿಗೆ ಸೇರಿದ ಕೊಳವೆ ಬಾವಿಯಿಂದ ಇಲ್ಲಿಯ ಜನ ನೀರಿನ ಕೊಡಗಳನ್ನು ಹೊತ್ತು ತರುತ್ತಿದ್ದಾರೆ. ಅವರೂ ಇಲ್ಲವೆಂದರೆ ನೀರೇ ಇಲ್ಲ, ತೋಟಗಳಿಗೆ ಹೋಗಬೇಕೆಂದರೆ ಚತುಷ್ಪಥ ಹೆದ್ದಾರಿ ದಾಟಬೇಕು, ನೀರಿಗೆ ಹೋದವರು ಮನೆಗೆ ಮರಳುತ್ತಾರೆ ಎಂಬ ಖಾತರಿ ಇಲ್ಲ. ಇಷ್ಟೆಲ್ಲ ಸಮಸ್ಯೆ ಇದ್ದರೂ ಪಕ್ಕದಲ್ಲೇ ಮನೆ ಮಾಡಿಕೊಂಡಿರುವ ಈ ವಾರ್ಡನ್ನು ಪ್ರತಿನಿಧಿಸುವ ಪುರಸಭೆ ಸದಸ್ಯ ಉಮೇಶ ಮಂಗಳೂರು ಗಮನಹರಿಸಿಲ್ಲ ಎಂಬುದು ಅಲ್ಲಿಯ ಜನರ ಆರೋಪ.

8-15 ದಿನಗಳಿಗೆ ಒಮ್ಮೆ ಕುಡಿಯುವ ನೀರು ಬರಬಹುದು ಇಲ್ಲವೆ ಬರಲಿಕ್ಕಿಲ್ಲ, ಹಾಗಾಗಿ ಮಹಿಳೆಯರು, ಮಕ್ಕಳು ಕೊಡಗಳನ್ನು ಹೊತ್ತು ತರಬೇಕು, ಪುರುಷರು ಸೈಕಲ್ ಅಥವಾ ನೀರಿನ ಬಂಡಿಯನ್ನೇ ದ್ವಿಚಕ್ರ ವಾಹನಕ್ಕೆ ಜೋಡಿಸಿ ಎಳೆದುಕೊಂಡು ಬರುವ ದೃಶ್ಯ ಇಲ್ಲಿ ಸಾಮಾನ್ಯ ಎಂದು ಅಲ್ಲಿಯ ನಿವಾಸಿಗಳಾದ ಬಸವರಾಜ ಬಂಡಿ, ಶರಣಪ್ಪ ಕೋಳಿಕಾಲ, ಹನಮಂತಪ್ಪ ವಜ್ರಬಂಡಿ, ವೀರೇಶ ವಸ್ತ್ರದ ಮತ್ತಿತರರು ಗೋಳು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.