ADVERTISEMENT

ನೇಮಕಾತಿ ಸ್ಥಗಿತಕ್ಕೆ ಒತ್ತಾಯ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 8:52 IST
Last Updated 4 ಜನವರಿ 2014, 8:52 IST

ಕೊಪ್ಪಳ: ಗುಲ್ಬರ್ಗದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿವಿಧ ಬೋಧಕ ಹುದ್ದೆಗಳ ಭರ್ತಿಗಾಗಿ ನಡೆಯುತ್ತಿರುವ  ನೇಮಕಾತಿ ಪ್ರಕ್ರಿಯೆ­ಯನ್ನು ತಕ್ಷಣವೇ ತಡೆಹಿಡಿಯಬೇಕು ಎಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾದ ಯುವ ಘಟಕ ನಗರ­ದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.

ಇಲ್ಲಿನ ಜಿಲ್ಲಾಡಳಿತ ಭವನದ ಮುಖ್ಯ ದ್ವಾರದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ನಂತರ ಜಿಲ್ಲಾಧಿ­ಕಾರಿಗಳ ಮೂಲಕ ಕೇಂದ್ರ ಮಾನವ ಸಂಪನ್ಮೂಲ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಪೂರಕವಾಗು­ವಂತೆ ಇತ್ತೀಚೆಗೆ ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತರಲಾಗಿದೆ. ಈ ತಿದ್ದುಪಡಿಯ ಲಾಭ ಈ ಭಾಗದ ಅಭ್ಯರ್ಥಿಗಳಿಗೆ ಸಿಗುವಂತಾಗಬೇಕು. ಆದರೆ, ಕೇಂದ್ರೀಯ ವಿಶ್ವವಿದ್ಯಾಲಯ ಮಾತ್ರ ಈ ತಿದ್ದುಪಡಿಯಡಿ ಸಿಗುವ ಮೀಸಲಾತಿಯಂತೆ ನೇಮಕಾತಿ ನಡೆಸುತ್ತಿಲ್ಲ ಎಂದು ಪ್ರತಿಭಟನಾ­ಕಾರರು ದೂರಿದರು.
ಸಂವಿಧಾನದ 371(ಜೆ) ಕಲಂ ಅಡಿ ಕೂಡಲೇ ನೇಮಕಾತಿ ನಡೆಯಬೇಕು ಅಲ್ಲಿಯ ವರೆಗೆ ನೇಮಕಾತಿ ಪ್ರಕ್ರಿಯೆ­ಯನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.

ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಗ­ರಾವ್ ಕುಲಕರ್ಣಿ, ರಾಜು ಬಾಕಳೆ, ನಗರಸಭಾ ಸದಸ್ಯರಾದ ಅಪ್ಪಣ್ಣ ಪದಕಿ, ಗವಿಸಿದ್ಧಪ್ಪ ಚಿನ್ನೂರು, ಮುಖಂಡರಾದ ಮಂಜುನಾಥ ಅಂಗಡಿ, ಡಿ.ಮಲ್ಲಣ್ಣ, ಮಹಾಂತೇಶ ಮೈನಳ್ಳಿ, ಯುವ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಪಾಟೀಲ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಹೇಮಲತಾ ನಾಯಕ, ಜಿಲ್ಲಾ ಬಿಜೆಪಿ ವಕ್ತಾರ ಚಂದ್ರಶೇಖರ ಪಾಟೀಲ ಹಲಗೇರಿ, ಹಾಲೇಶ ಕಂದಾರಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.