ADVERTISEMENT

ಪೌರಕಾರ್ಮಿಕರ ಧರಣಿ ಆರಂಭ

ಬಾಕಿ ವೇತನ ಪಾವತಿಸಲು ನಗರಸಭೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 11:35 IST
Last Updated 9 ಜೂನ್ 2018, 11:35 IST
ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಶುಕ್ರವಾರ ಗಂಗಾವತಿ ನಗರಸಭೆ ಕಚೇರಿ ಎದುರು ಪೌರಕಾರ್ಮಿಕರು ಧರಣಿ ನಡೆಸಿದರು
ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಶುಕ್ರವಾರ ಗಂಗಾವತಿ ನಗರಸಭೆ ಕಚೇರಿ ಎದುರು ಪೌರಕಾರ್ಮಿಕರು ಧರಣಿ ನಡೆಸಿದರು   

ಗಂಗಾವತಿ: ಕಳೆದ ನಾಲ್ಕೂವರೆ ತಿಂಗಳಿನಿಂದ ಬಾಕಿಯುಳಿಸಿಕೊಂಡಿರುವ ವೇತನವನ್ನು ನಗರಸಭೆ ಕೂಡಲೇ ಪಾವತಿ ಮಾಡಬೇಕೆಂದುಒತ್ತಾಯಿಸಿ  ಪೌರಕಾರ್ಮಿಕರು ನಗರಸಭೆ ಕಚೇರಿ ಎದುರು ಶುಕ್ರವಾರದಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಹಿರಿಯ ಹೋರಾಟಗಾರ ಜೆ. ಭಾರದ್ವಾಜ್ ನೇತೃತ್ವದಲ್ಲಿ ಬಾಬು ಜಗಜೀವನರಾಂ ವೃತ್ತದ ಸಮೀಪ (ನಗರಸಭೆ ಎದುರು) ಪ್ರತಿಭಟನೆ ಹಮ್ಮಿಕೊಂಡ ಪೌರನೌಕರರು, ವೇತನ ಬಾಕಿಯ ಬಗ್ಗೆ ಖಚಿತ ಭರವಸೆ ಸಿಗದ ಹೊರತು ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜೆ. ಭಾರದ್ವಾಜ್ ಮಾತನಾಡಿ, ‘ಪೌರನೌಕರರಿಗೆ ನಗರಸಭೆಯು ಸುಮಾರು ಎರಡುವರೆ ಕೋಟಿ ರೂಪಾಯಿ ಮೊತ್ತದಷ್ಟು ವೇತನ ಬಾಕಿ ಇರಿಸಿಕೊಂಡಿದೆ. ನಾಲ್ಕೂವರೆ ತಿಂಗಳಿನಿಂದ ವೇತನವಿಲ್ಲದೇ ಪೌರನೌಕರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಬಾರಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಭರವಸೆ ನೀಡಿ, ಕೊನೆಯ ಕ್ಷಣದಲ್ಲಿ ಕೈಕೊಟ್ಟರು. ಸರ್ಕಾರದ ಹಂತದಲ್ಲಿದ್ದ ಕಾಯಂಗೊಳಿಸುವ ಪ್ರಕ್ರಿಯೆಯನ್ನು ನಗರಸಭೆ ಆಡಳಿತ ಮಂಡಳಿಯ ಕೆಲವರು ಉದ್ದೇಶ ಪೂರ್ವಕವಾಗಿ ತಪ್ಪಿಸಿದರು’ ಎಂದು ಆರೋಪಿಸಿದರು.

ADVERTISEMENT

‘ಹಾಲಿ ಶಾಸಕ ಪರಣ್ಣ ಮುನವಳ್ಳಿ ಅವರು ವಾರದಲ್ಲಿ ಮೊದಲ ಹಂತದ ಹಣ ಬಳಿಕ ಹಂತಹಂತವಾಗಿ ಎಲ್ಲ ಬಾಕಿಯನ್ನು ಪಾವತಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಆದರೆ ಅದು ಖಚಿತಪಡಿಸಿದರೆ ಮಾತ್ರ ಧರಣಿ ಹಿಂದಕ್ಕೆ ಪಡೆಯುತ್ತೇವೆ’ ಎಂದು ಅವರು ತಿಳಿಸಿದರು.

ನಗಗರಸಭೆಯ ಅಧಿಕಾರಿಗಳ ಹಾಗೂ ಆಡಳಿತ ಮಂಡಳಿಯ ವಿರುದ್ಧ ಧರಣಿನಿರತರು ಘೋಷಣೆ ಕೂಗಿದರು. ಮುಖಂಡರಾದ  ಹನುಮಂತಪ್ಪ, ದ್ಯಾವ್ವಮ್ಮ, ಶೇಖರ, ನಿಂಗಮ್ಮ, ಪರಶುರಾಮ, ಮಾಯಮ್ಮ, ಗಿಡ್ಡಪ್ಪ, ಬುಡ್ಡಪ್ಪ, ಹನುಮಂತ, ಹುಸೇನಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.