ADVERTISEMENT

ಭೂಮರೆಡ್ಡಿಗೆ ಟಿಕೆಟ್- ಕಾರ್ಯಕರ್ತರ ಒಲವು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 6:58 IST
Last Updated 5 ಡಿಸೆಂಬರ್ 2012, 6:58 IST

ಕೊಪ್ಪಳ: ಜೆಡಿಎಸ್ ಚುನಾವಣಾ ತಾಲೀಮು ಆರಂಭಗೊಂಡಿದೆ. ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಾರು ಎಂಬ ಪಕ್ಷದ ಕಾರ್ಯಕರ್ತರಲ್ಲಿ ಮೂಡಿದ್ದ ಕುತೂಹಲಕ್ಕೆ ಉತ್ತರ ಕೊಡುವ ಪ್ರಯತ್ನವಾಗಿ ಮಂಗಳವಾರ ತಾಲ್ಲೂಕಿನ ಚಿಕ್ಕಸಿಂದೋಗಿ ಗ್ರಾಮದ ಬಳಿಯ ತೋಟವೊಂದರಲ್ಲಿ ಸಭೆಯನ್ನು ನಡೆಸಲಾಗಿದೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಆಕ್ಷಾಂಕೆ ಹೊಂದಿರುವ ಗುತ್ತಿಗೆದಾರ ಸುರೇಶ ಭೂಮರೆಡ್ಡಿ ಅವರೇ ಈ ಸಭೆಯ ಸೂತ್ರಧಾರರು ಎಂದು ಹೇಳಲಾಗಿದ್ದು, ಅವರಿಗೇ ಟಿಕೆಟ್ ಕೊಡುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ಮುಖಂಡರು, ಕಾರ್ಯಕರ್ತರು ಪಕ್ಷದ ವರಿಷ್ಠರಿಗೆ ಒತ್ತಾಯಿಸುವ ಅಭಿಪ್ರಾಯವನ್ನು ತಿಳಿಸಿದರು ಎಂದು ಹೆಸರು ಹೇಳಲು ಇಚ್ಛಿಸದ ಮುಖಂಡರೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷದ ಸಂಘಟನೆಗೆ ತೊಡಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಆದಷ್ಟು ಬೇಗನೇ ಪಕ್ಷವನ್ನು ಸೇರಬೇಕು ಎಂದು ಸುರೇಶ ಭೂಮರೆಡ್ಡಿ ಅವರ ಮೇಲೆ ಒತ್ತಡ ಹೇರಲಾಯಿತು.
ಅಲ್ಲದೇ, ಡಿ. 14ರ ಒಳಗಾಗಿ ನಗರದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸುವ ಮೂಲಕ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಬೇಕು ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು ಎಂದು ಇದೇ ಮುಖಂಡರು ತಿಳಿಸಿದ್ದಾರೆ.

ಟಿಕೆಟ್‌ನ ಮತ್ತೊಬ್ಬ ಪ್ರಬಲ ಆಕ್ಷಾಂಕ ಪ್ರದೀಪಗೌಡ ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು.
ಪಕ್ಷದ ವರಿಷ್ಠರು ಯಾರಿಗೇ ಟಿಕೆಟ್ ನೀಡಿದರು ಅವರ ಗೆಲುವಿಗೆ ಎಲ್ಲ ಕಾರ್ಯಕರ್ತರು ಶ್ರಮಿಸಬೇಕು. ಒಂದು ವೇಳೆ ಭೂಮರೆಡ್ಡಿ ಅವರಿಗೆ ಟಿಕೆಟ್ ನೀಡಿದರೆ ಅವರ ಗೆಲುವಿಗೆ ದುಡಿಯುವುದಾಗಿ ಪ್ರದೀಪಗೌಡ ಸಭೆಗೆ ಭರವಸೆ ನೀಡಿದರು.

ಅಲ್ಲದೇ, ಅಭ್ಯರ್ಥಿ ಯಾರು ಎಂಬುದನ್ನು ಪಕ್ಷದ ನಾಯಕರು ಅಧಿಕೃತವಾಗಿ ಘೋಷಣೆ  ಮಾಡುವವರೆಗೆ ಈ ಸಂಬಂಧ ವದಂತಿಗಳನ್ನು ಹಬ್ಬಿಸದಂತೆ ಅವರು ಕಾರ್ಯಕರ್ತರಲ್ಲಿ ಮನವಿ   ಮಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ನಾಗನಗೌಡ ಮಾಲಿಪಾಟೀಲ, ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಲೂರು, ಸದಸ್ಯರಾದ ಡಾ.ಉಪೇಂದ್ರ, ಮಹಿಬೂಬ್ ಹುಸೇನ್ ನಾಲಬಂದ್,  ಮುಖಂಡರಾದ ಗೋಣೇಶ ಉಪ್ಪಾರ, ಸಿದ್ದೇಶ ಪೂಜಾರ, ಜಗದೀಶಗೌಡ ತೆಗ್ಗಿನಮನಿ, ಎಸ್‌ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಗೊಂಡಬಾಳ ಸಭೆಯಲ್ಲಿ ಪಾಲ್ಗೊಂಡಿದ್ದರು                     ಎಂದು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.