ADVERTISEMENT

ರಾಜ್ಯ ಬಂದ್‌: ಕನ್ನಡಪರ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2017, 6:12 IST
Last Updated 13 ಜೂನ್ 2017, 6:12 IST
ಕೊಪ್ಪಳದ ಅಶೋಕ ವೃತ್ತದಲ್ಲಿ ಸೋಮವಾರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಕೊಪ್ಪಳದ ಅಶೋಕ ವೃತ್ತದಲ್ಲಿ ಸೋಮವಾರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಕೊಪ್ಪಳ: ತುಂಗಭದ್ರಾ ಅಣೆಕಟ್ಟೆಯ ಹೂಳೆತ್ತುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ ಶೆಟ್ಟಿ ಬಣ) ನೇತೃತ್ವದಲ್ಲಿ ನಗರದ ಅಶೋಕ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ವಿಧಾನ ಮಂಡಲದ ಅಧಿವೇಶನದಲ್ಲಿ ಕೂಡಲೇ ಚರ್ಚಿಸಿ ಹೂಳೆತ್ತುವ ಯೋಜನೆ ಆರಂಭಿಸಬೇಕು. ಮಹಾದಾಯಿ, ಕಳಸಾ ಬಂಡೂರಿ ಯೋಜನೆಗಳಿಗೂ ಚಾಲನೆ ನೀಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕೃಷ್ಣಾ ‘ಬಿ’ ಸ್ಕೀಂ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಬಯಲು ಸೀಮೆಯ ಶಾಶ್ವತ ನೀರಾವರಿಗೆ ಯೋಜನೆ ಕೈಗೊಳ್ಳಬೇಕು. ಬೆಳಗಾವಿಯ ಮಹಾರಾಷ್ಟ್ರದ ಏಕೀಕರಣ ಸಮಿತಿಯ ಸಂಘಟನೆಯನ್ನು ಸರ್ಕಾರಗಳು ನಿಷೇಧಿಸಬೇಕು. ಕಾಸರಗೋಡು ಗಡಿ ಸಮಸ್ಯೆ ಇತ್ಯರ್ಥ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ADVERTISEMENT

ವೇದಿಕೆಯ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ, ಕೆ. ಪರಶುರಾಮ, ಮುತ್ತುರಾಜ್ ಛಲವಾದಿ, ಮುರಳಿ, ಖಾಜಾವಲಿ, ಶರಣಪ್ಪ ಪಲ್ಲವಿ, ಜಿಲ್ಲಾ ಸಂಚಾಲಕ ಅಶೋಕ, ಜಿಲ್ಲಾ ಉಪಾಧ್ಯಕ್ಷರಾದ ದಾದಾಪೀರ್, ಬಸವರಾಜ, ಸಹ ಕಾರ್ಯದರ್ಶಿ ಅಬ್ದುಲ್, ಜಿಲ್ಲಾ ಸದಸ್ಯ ಜೋಗಿನ್‌ ರಮೇಶ, ತಾಲ್ಲೂಕು ಉಪಾಧ್ಯಕ್ಷ ಉಮೇಶ, ತಾವರಗೇರಾ ಘಟಕದ ಅಧ್ಯಕ್ಷ ಯಮನೂರಪ್ಪ, ಹುಲಿಹೈದರ ಗ್ರಾಮ ಘಟಕದ ಅಧ್ಯಕ್ಷ ಸಿದ್ದು ನಾಯಕ ಇದ್ದರು.

ಕನ್ನಡಪರ ಸಂಘಟನೆಗಳ ಪ್ರತಿಭಟನೆ (ಯಲಬುರ್ಗಾ): ವಿವಿಧ ಕನ್ನಡ ಪರ ಸಂಘಟನೆಗಳು ರಾಜ್ಯ ಬಂದ್‌ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಜನ ಕಲ್ಯಾಣ ವೇದಿಕೆ ಹಾಗೂ ಕನ್ನಡ ಸೇನೆ ಪ್ರತಿಭಟನೆ ನಡೆಸಿದರು.

ಜನಕಲ್ಯಾಣ ವೇದಿಕೆಯ ಸ.ಶರಣಪ್ಪ ಪಾಟೀಲ ಮಾತನಾಡಿ, ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶದ ನೀರಾವರಿ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಇದರ ಪರಿಣಾಮ ಈ ಭಾಗದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಆದರೂ ನೀರಿನ ಯೋಜನೆಗಳ ಬಗ್ಗೆ ಸೂಕ್ತ ನಿರ್ಧಾರ ಕೈ ಗೊಳ್ಳದಿರುವುದು ಸರ್ಕಾರದಲ್ಲಿ ಇಚ್ಚಾಶಕ್ತಿ ಕೊರತೆಯಿದೆ ಎಂದು ದೂರಿದರು.

ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗುತ್ತಾ ಪಟ್ಟಣದಲ್ಲಿ ನಡೆಸಿ ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಕನ್ನಡ ಸೇನೆಯ ತಾಲ್ಲೂಕು ಅಧ್ಯಕ್ಷ ಅಲ್ಲಾಭಕ್ತಿ ಕಲ್ಲೂರು, ಕಾರ್ಯಕರ್ತರಾದ ಶಿವರಾಜಗೌಡ ಪಾಟೀಲ, ಶಿವಬಸಪ್ಪ ದೇಸಾಯಿ, ಮಲ್ಲಿಕಾರ್ಜುನ ಪಾಟೀಲ, ಬಸವರಾಜ ಸರದ, ಮೈಲಾರಗೌಡ ಶಾಂತಗೇರಿ, ನಿಂಗಪ್ಪ ಮಾನಶೆಟ್ಟರ ಇದ್ದರು.

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ (ಗಂಗಾವತಿ): ತುಂಗಭದ್ರಾ ಹೂಳೆತ್ತುವುದು, ಕಳಸಾ-ಬಂಡೂರಿ ಯೋಜನೆ ಜಾರಿ, ರೈತರ ಸಾಲಮನ್ನಾ, ಬೆಳೆ ಪರಿಹಾರ, ಕೃಷ್ಣಾ  ಬಿ ಸ್ಕೀಂ ಯೋಜನೆ ಜಾರಿ ಸೇರಿದಂತೆ  ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿದವು.

ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ಗಂಗಾವತಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಡಿ. ಅಲಿ ನೇತೃತ್ವದಲ್ಲಿ ಸಂಘಟನೆಯ ಪ್ರತಿಭಟನೆ ನಡೆಯಿತು. ಸಂಘಟನೆಯ ಪದಾಧಿಕಾರಿಗಳಾದ ಮಹೆಬೂಬವಲಿ, ಎ. ಮಂಜು ಆರ್ಹಾಳ, ಟಿ. ರಾಮಣ್ಣ, ಗಂಜಿಪೇಟೆ ವಿಶ್ವನಾಥ, ಕಳಕಪ್ಪ ಚಲುವಾದಿ, ಅಟೇಲ್ ಭಾಷಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕನ್ನಡಸೇನೆ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವ ಜೇಕಿನ್ ಹಾಗೂ ತಾಲ್ಲೂಕು ಅಧ್ಯಕ್ಷ ಮಂಜುನಾಥ ಪತ್ತಾರ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಘವೇಂದ್ರ, ಜಂಬಣ್ಣ, ನಿಂಗಪ್ಪ ಕಲಿಕೇರಿ, ಮಂಜುನಾಥ, ಹೇಮಣ್ಣ, ಬಸವರಾಜ, ಕನಕಪ್ಪ ಸುಣಗಾರ, ಮೌಲಪ್ಪ ಇದ್ದರು.

ಜನಹಿತ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ರಮೇಶ ಕೋಟೆ ನೇತೃತ್ವದಲ್ಲಿ ಗಾಳೇಶ, ಶಕುಂತಲಾ ಇಟಗಿ, ಹನುಮಂತಪ್ಪ, ನಾಗರತ್ನ, ಮದನಕುಮಾರ, ಮಾರುತಿ ಪ್ರತಿಭಟನೆ ನಡೆಸಿ ಕಂದಾಯ ಇಲಾಖೆ  ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಜನ್ಮಭೂಮಿ ರಕ್ಷಣಾ ಪಡೆ ಸಂಘಟನೆಯ ಕಾರ್ಯಕರ್ತರು ಜಿಲ್ಲಾ ಅಧ್ಯಕ್ಷ ಗುರುಸಿದ್ದಪ್ಪ ಭೋವಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಎಸ್.ಎಸ್. ಹೈದರ ಅಲಿ, ಎಂ.ಡಿ, ತೌಫಿಕ್, ಜಯರಾಮ್,, ಸಿದ್ದುನಾಯಕ, ಚಿದಾನಂದ, ಗೌಸ್, ಶಿವು, ಆನಂದ್ ಲಂಕಿ, ಚಂದ್ರಶೇಖರ ವಗ್ಗಾ, ಅನ್ವರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.