ADVERTISEMENT

ವಿರುಪಾಪುರ ಗಡ್ಡೆ: ತೆರವು ಕಾರ್ಯಾಚರಣೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2015, 10:05 IST
Last Updated 24 ನವೆಂಬರ್ 2015, 10:05 IST

ಕೊಪ್ಪಳ: ಗಂಗಾವತಿ ತಾಲ್ಲೂಕಿನ ವಿರುಪಾಪುರಗಡ್ಡಿ ಗ್ರಾಮದಲ್ಲಿ ಅಕ್ರಮ ರೆಸಾರ್ಟ್‌ ತೆರವು ಕಾರ್ಯಾಚರಣೆಯಲ್ಲಿ ನಿರಾಶ್ರಿತರಾದ ಗ್ರಾಮಸ್ಥರು ನಡೆಸಿದ ಪ್ರತಿಭಟನೆಯಲ್ಲಿ ವಿದೇಶಿಗರು ಪಾಲ್ಗೊಂಡು ಗಮನ ಸೆಳೆದರು.

ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಮತ್ತು ನಿರಾಶ್ರಿತರಿಗೆ ಗಂಜಿ ಕೇಂದ್ರವನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದರು ಪ್ರತಿಭಟನೆ ನಡೆಸಿದರು. ಎಂಟು ವಿದೇಶಿ ಪ್ರಜೆಗಳು ಹಾಗೂ ಮಕ್ಕಳು ಪಾಲ್ಗೊಂಡಿದ್ದರು. ಗ್ರಾಮಸ್ಥ ಫಕೀರಪ್ಪ ಮಾತನಾಡಿ ‘ನಾವು ಸರ್ವೆ ನಂಬರ್‌49ರಲ್ಲಿ 35–40 ವರ್ಷಗಳಿಂದ ಸರ್ಕಾರ ಮಂಜೂರು ಮಾಡಿದ ಜನತಾ ಮನೆಗಳಲ್ಲಿ ವಾಸ ಮಾಡುತ್ತಿದ್ದೇವೆ.

ಇಲ್ಲಿ 50ಜನತಾ ಮನೆಗಳು, 40ಗುಡಿಸಲುಗಳು ಇದ್ದು, ಪ್ರತಿವರ್ಷ ಗ್ರಾಮ ಪಂಚಾಯಿತಿಗೆ ತೆರಿಗೆ ಪಾವತಿಸುತ್ತಿದ್ದೇವೆ. ಸರ್ಕಾರಿ ಶಾಲೆ, ಅಂಗನವಾಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಆದರೆ ಹಂಪಿ ಅಭಿವೃದ್ಧಿ ಪ್ರಾಧಿಕಾರ, ಅರಣ್ಯ ಇಲಾಖೆ, ಪೋಲಿಸ್‌ ಇಲಾಖೆಗಳು ಮಹಿಳೆಯರ, ಮಕ್ಕಳ ಮತ್ತು ಪ್ರವಾಸಿಗರ ಮೇಲೆ ನ.22ರಂದು ಹಲ್ಲೇ ನಡೆಸಿ ಮಾನಹಾನಿ ಮಾಡಿದ್ದಾರೆ.

ಮನೆಗಳನ್ನು ನೆಲಸಮ ಮಾಡಿದ್ದಾರೆ. ಕಾಲಾವಕಾಶ ನೀಡದೆ ನೋಟಿಸ್‌ ಕೊಟ್ಟು ಎರಡೇ ದಿನದಲ್ಲಿ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ. 1992–93ರಲ್ಲಿ ಅರಣ್ಯ ಇಲಾಖೆ ಸರ್ವೆ ಮಾಡಿ, ವಾಸದ ಜಾಗವನ್ನು ಬಿಟ್ಟು ಅರಣ್ಯ ಪ್ರದೇಶಕ್ಕೆ ಮಾತ್ರ ತಂತಿ ಬೇಲಿ ಹಾಕಿದ್ದಾರೆ. ಈ ಸಂಬಂಧ ದಾರವಾಡದ ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆಯನ್ನು ನೀಡಲಾಗಿತ್ತು. ತಡೆಯಾಜ್ಞೆ ಹಿಂದಕ್ಕೆ ಪಡೆದದ್ದನ್ನು ನೋಡಿ ನಮಗೆ ನೋಟಿಸ್‌ ನೀಡಿರುತ್ತಾರೆ. ಸರ್ವೆ ನಂ. 15,17,19,23 ಮತ್ತು 42ರಲ್ಲಿ ವಾಸ ಮಾಡಲು ಸಾಕಷ್ಟು ಜಾಗ ಇದ್ದು, ನಮಗೆ ಈ ಜಾಗದಲ್ಲಿ ಪುನರ್ವಸತಿ ಕಲ್ಪಿಸಿಕೊಡಬೇಕು’ ಎಂದು ಒತ್ತಾಯಿಸಿದರು.

ಎಸ್‌.ದುರ್ಗಾನಾಯಕ, ಪರಶುರಾಮ, ಹುಲುಗಪ್ಪ, ಶೇಖರಪ್ಪ, ಪೀರ, ದೇವಪ್ಪ, ಮಂಜುನಾಥ, ಪರಶುರಾಮ, ಹನುಮಂತ, ಯಮನಪ್ಪ, ಎನ್‌.ನಾರಾಯಣ, ಎಚ್‌.ಶಿವಕುಮಾರ, ವಿ.ಗಾಳೆಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.