ADVERTISEMENT

ವಿಶ್ವಾಸಾರ್ಹತೆ ಬೆಳೆಸುವ ವಿವಿಪ್ಯಾಟ್

ಚುನಾವಣಾ ಸಂಪನ್ಮೂಲ ವ್ಯಕ್ತಿ ಗಂಗಾಧರ ಕುರಟ್ಟಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 9:55 IST
Last Updated 7 ಏಪ್ರಿಲ್ 2018, 9:55 IST

ಯಲಬುರ್ಗಾ: ’ಮತದಾರರು ತಾವು ಚಲಾವಣೆ ಮಾಡಿದ ಮತದ ಖಾತರಿ ಪಡಿಸುವ ವಿವಿಪ್ಯಾಟ್ ವ್ಯವಸ್ಥೆ ಮತದಾರರ ವಿಶ್ವಾಸ ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ’ ಎಂದು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಚುನಾವಣಾ ಸಂಪನ್ಮೂಲ ವ್ಯಕ್ತಿ ಗಂಗಾಧರ ಕುರಟ್ಟಿ ಹೇಳಿದರು.

ಪಟ್ಟಣದ ಹಳೆಯ ಪಂಚಾಯಿತಿ ಅವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮತಯಂತ್ರ ಹಾಗೂ ವಿವಿಪ್ಯಾಟ್ ಬಳಕೆ, ಮಹತ್ವ ಕುರಿತು ಸಾರ್ವಜನಿಕರಿಗಾಗಿ ಪ್ರಾತ್ಯಕ್ಷಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮತಚಲಾವಣೆಯು ಯಾರಿಗೆ ಮಾಡಿದ್ದೇವೆ ಎಂಬುದನ್ನು ಸೂಚಿಸುವ ವಿವಿಪ್ಯಾಟ್‍ದಲ್ಲಿ 7 ಸೆಕೆಂಡ್‍ ವೀಕ್ಷಿಸಲು ಅವಕಾಶವಿರುತ್ತದೆ. ಏನಾದರೂ ಲೋಪವಾದರೆ ಮತಗಟ್ಟೆ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ. ಪ್ರಥಮವಾಗಿ ರಾಜ್ಯದಲ್ಲಿ ಈ ಪದ್ಧತಿ ಅಳವಡಿಕೆಯಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಮತದಾರರಿಗೆ ವಿಶ್ವಾಸ ಮೂಡಿಸುವ ಉದ್ದೇಶದಿಂದ ಚುನಾವಣಾ ಆಯೋಗ ಅನುಕೂಲ ಮಾಡಿಕೊಟ್ಟಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಚುನಾವಣಾ ಸಹಾಯಕ ಅಧಿಕಾರಿ ವಿಜಯಕುಮಾರ ಗುಂಡೂರ ಮಾತನಾಡಿ, ಮತ ಚಲಾಯಿಸಿರುವ ಅಭ್ಯರ್ಥಿಯ ಕ್ರಮಸಂಖ್ಯೆ, ಚಿಹ್ನೆ, ವಿವಿಪ್ಯಾಟ್ ಯಂತ್ರದ ಪರದೆಯ ಮೇಲೆ ಮೂಡುತ್ತದೆ. ಮತದಾರರು ಯಾವುದೇ ಸಂದೇಹ, ತಪ್ಪು ಕಲ್ಪನೆ ಮಾಡಿಕೊಳ್ಳದೆ ಮುಕ್ತವಾಗಿ ಮತ ಹಾಕುವಂತೆ ಸಲಹೆ ನೀಡಿದರು.

ಉಪ ತಹಶೀಲ್ದಾರ್ ಮಲ್ಲಿಕಾರ್ಜುನ ಜಾನೆಕಲ್, ರಾಜ್ಯ ಸಂಪನ್ಮೂಲ ವ್ಯಕ್ತಿ ಪಿ.ವಿಜಯಕುಮಾರ, ಕೆ.ತಿಮ್ಮಪ್ಪ, ನಾಗೇಶ, ಈ. ಎಸ್. ಬಿಸಲದಿನ್ನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.