ADVERTISEMENT

ಸಂಭ್ರಮದ ಮಹಾರಥೋತ್ಸವ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 8:22 IST
Last Updated 2 ಏಪ್ರಿಲ್ 2013, 8:22 IST

ಕುಷ್ಟಗಿ: ಶರಣಬಸವೇಶ್ವರ ಜಾತ್ರಾ ಮಹೊತ್ಸವ ಮತ್ತು ಪುರಾಣ ಮಹಾಮಂಗಲದ ಅಂಗವಾಗಿ ತಾಲ್ಲೂಕಿನ ತಳುವಗೇರಾದಲ್ಲಿ ಭಾನುವಾರ ಸಂಜೆ ಮಹಾರಥೋತ್ಸವ ಸಂಭ್ರಮ ಸಡಗರದ ಮಧ್ಯೆ ನೆರವೇರಿತು.

ಮಹಿಳೆಯರು, ಮಕ್ಕಳು ಸೇರಿದಂತೆ ರಥೋತ್ಸವಕ್ಕೆ ಆಗಮಿಸಿದ್ದ ಸ್ಥಳೀಯರು, ಸುತ್ತಲಿನ ಸಹಸ್ರ ಸಂಖ್ಯೆ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಉತ್ತತ್ತಿ ಸಮರ್ಪಿಸಿ ಶ್ರದ್ಧೆ ಭಕ್ತಿ ಮೆರೆದರು. ನಂದಿಕೋಲು ಕುಣಿತ, ಡೊಳ್ಳು ಕಲಾವಿದರು ಗ್ರಾಮೀಣ ಕಲಾ ಸಂಸ್ಕೃತಿಯನ್ನು ಅನಾವರಣಗೊಳಿಸಿದರು.

ಚಳಗೇರಿಯ ವಿರುಪಾಕ್ಷಲಿಂಗ ಸ್ವಾಮೀಜಿ, ನಿಡಶೇಸಿಯ ಚನ್ನಬಸವ ಸ್ವಾಮೀಜಿ, ಮದ್ದಾನಿಹಿರೇಮಠದ ಕರಿಬಸವ ಸ್ವಾಮೀಜಿ ಮತ್ತು ಹಿರೇಮಣಿಕಟ್ಟು ಶ್ರೀಗಳ ಸಾನಿಧ್ಯದಲ್ಲಿ ಜಾತ್ರಾ ಮಹೊತ್ಸವ ನೆರವೇರಿತು. ಶಾಸಕ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕರಾದ ಕೆ.ಶರಣಪ್ಪ, ದೊಡ್ಡನಗೌಡ ಪಾಟೀಲ, ಬಿಎಸ್‌ಆರ್ ಮುಖಂಡ ರಾಜಶೇಖರಗೌಡ ಗೋನಾಳ ಮೊದಲಾದವರು ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ಬೆಳಿಗ್ಗೆ ವಿಶೇಷ ಪೂಜೆ, ಸಾಮೂಹಿಕ ಮದುವೆಯಲ್ಲಿ 12 ಜೋಡಿ ವಧುವರರು ದಾಂಪತ್ಯ ಬದುಕಿಗೆ ಕಾಲಿರಿಸಿದರು. ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ಪುರಾಣ ಮಹಾಮಂಗಲ, ಧರ್ಮ ಜಾಗೃತಿ ಸಭೆ ನಡೆಯಿತು. ಹಿರೇಅರಳಿಹಳ್ಳಿಯಲ್ಲಿ: ಸಮಿಪದ ಹಿರೇಅರಳಿಹಳ್ಳಿ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರಾ ಮಹೊತ್ಸವ ಮತ್ತು ಉಚಿತ ಸಾಮೂಹಿಕ ಮದುವೆ, ಪುರಾಣ ಮಹಾಮಂಗಲ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು.
ನೂತನವಾಗಿ ನಿರ್ಮಿಸಿದ ಈಶ್ವರ ದೇವಸ್ಥಾನದ ಗೋಪುರವನ್ನು ಕಲಾ ಪ್ರಕಾರಗಳು, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಈಶ್ವರ ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಮದುವೆಯಲ್ಲಿ ನಿಡಶೇಸಿಯ ಚನ್ನಬಸವೇಶ್ವರ ಸ್ವಾಮೀಜಿಯವರ ಸಾನಿಧ್ಯದಲ್ಲಿ 17 ಜೋಡಿ ದಾಂಪತ್ಯ ಬದುಕಿಗೆ ಹೆಜ್ಜೆ ಹಾಕಿದರು. ಕುಷ್ಟಗಿಯ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಜಿ.ಪಂ ಸದಸ್ಯ ರಾಮಣ್ಣ ಸಾಲಭಾವಿ, ಮಾಜಿ ಸದಸ್ಯ ದೊಡ್ಡಯ್ಯ ಗದ್ದಡಕಿ, ಮುಖಂಡ ಜಿ.ಟಿ.ಪಂಪಾಪತಿ ಸೇರಿದಂತೆ ಅನೇಕ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಪುರಾಣ ಮಹಾಮಂಗಲದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶರಣಬಸವೇಶ್ವರರ ಭಾವಚಿತ್ರದ ಮೆರವಣಿಗೆ ಅದ್ದೂರಿಯಿಂದ ನೆರವೇರಿತು. ಜಾತ್ರಾಮಹೋತ್ಸವ ಸಮಿತಿ ಪ್ರಮುಖರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.