ADVERTISEMENT

ಸಂಭ್ರಮದ ಯೇಸು ಜನ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 6:07 IST
Last Updated 26 ಡಿಸೆಂಬರ್ 2012, 6:07 IST

ಗಂಗಾವತಿ: ಕ್ರೈಸ್ತ ಧರ್ಮದ ಪುನರ್‌ಸ್ಥಾಪಕ ಜೇಸಸ್ ಯೇಸುಕ್ರಿಸ್ತನ ಜನ್ಮ ದಿನಾಚರಣೆ ಸ್ವಾಗತಿಸಿ ನಗರದ ಗಂಜ್ ಪ್ರದೇಶದ ರೋಮನ್ ಕ್ಯಾಥೋಲಿಕ್ ಮತ್ತು ವಿಜಯನಗರ ಕಾಲೋನಿಯ ಇವ್ಯಾಂಜಿಕಲ್ ಚರ್ಚ್ ಆಫ್ ಇಂಡಿಯಾದಲ್ಲಿ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.

ಈ ಎರಡು ಚರ್ಚ್‌ಗಳಲ್ಲದೇ ನಗರದ ಹೊಸಳ್ಳಿ ರಸ್ತೆ, ಹಿರೋಹೊಂಡಾ ಶೋ ರೂಂ, ಮಹೆಬೂಬಿಯಾ ಕಾಲೋನಿ, ವಾರದ ತರಕಾರಿ ಮಾರುಕಟ್ಟೆ, ಹಿರೇಜಂತಕಲ್ ಪ್ರದೇಶದ ಚರ್ಚ್‌ಗಳಲ್ಲಿಯೂ ಕ್ರಿಸ್‌ಮಸ್ ಅಂಗವಾಗಿ ವಿವಿಧ ಕಾರ್ಯಕ್ರಮ ನಡೆದವು.

ಎಪಿಎಂಸಿ ಗಂಜ್ ಪ್ರದೇಶದಲ್ಲಿರುವ ರೋಮನ್ ಕ್ಯಾಥೋಲಿಕ್‌ನ ಬಾಲ ಯೇಸು ಮಂದಿರದಲ್ಲಿ (ಇನ್‌ಫ್ಯಾಂಟ್ ಆಫ್ ಜೇಸಸ್) ಯೇಸು ಜನಿಸಿದ ಘಳಿಗೆಯ ಸವಿನೆನಪಿಗಾಗಿ ಸೋಮವಾರ ರಾತ್ರಿ 10ಗಂಟೆಯಿಂದ ಮಧ್ಯಾರಾತ್ರಿ 2.30ರವರೆಗೆ ವಿಶೇಷ ಭಜನೆ, ಪ್ರಾರ್ಥನೆ ಮಾಡಲಾಯಿತು.

ಫಾದರ್ ಪುಷ್ಪರಾಜ್ ಭಕ್ತರನ್ನು ಉದ್ದೇಶಿಸಿ ಮಾತನಾಡಿ, ಈ ಬಾರಿಯ ಕ್ರಿಸ್‌ಮಸ್‌ನ್ನು ವಿಶ್ವಾಸದ ವರ್ಷವಾಗಿ ಆಚರಿಸಲಾಗುತ್ತಿದೆ ಎಂದು ಕ್ರಿಸ್ತನ ಜೀವನ, ಸಾಧನೆ, ಧರ್ಮೋಪದೇಶಗಳ ಬಗ್ಗೆ ಉಪನ್ಯಾಸ ನೀಡಿದರು.

ಆಶಾಕಿರಣ ಕುಟೀರದ ಸಿಸ್ಟರ್‌ಗಳಾದ ಟ್ರೀಜಾ, ಜೀನಾ, ವಿಕ್ಟೋರಿಯಾ, ಪ್ರಮುಖ ಸಾಮ್ಯುವೇಲ್, ಚೌರಪ್ಪ ಬುದ್ದಿನ್ನಿ, ಆನಂದ್, ವಿಜಯ್ ಉಪಸ್ಥಿತರಿದ್ದರು. ಪ್ರಾರ್ಥನೆಗೆ ಗ್ರಾಮೀಣ ಭಾಗದಿಂದಲೂ ಜನ ಆಗಮಿಸಿದ್ದರು.

ವಿಶೇಷ ಪ್ರಾರ್ಥನೆ: ವಿಜಯನಗರ ಕಾಲೋನಿಯಲ್ಲಿನ ಇಸಿಐ ಕಲ್ವರಿ ಚರ್ಚ್‌ನಲ್ಲಿ ಕ್ರಿಸ್‌ಮಸ್ ಅಂಗವಾಗಿ ಮಂಗಳವಾರ ವಿಶೇಷ ಪ್ರಾರ್ಥನೆ ನಡೆಯಿತು. ಫಾದರ್ ಯೇಸುದಾಸ್ ಯೇಸುವಿನ ಜನನ, ಮರಣ, ತ್ಯಾಗ, ಧರ್ಮ, ಉಪದೇಶಗಳ ಬಗ್ಗೆ ಉಪನ್ಯಾಸ ನೀಡಿದರು. ಸೋಮವಾರ ಚಿಣ್ಣರ ಕ್ರಿಸ್‌ಮಸ್ ಆಚರಿಸಲಾಯಿತು.

ಇವ್ಯಾಂಜಿಕಲ್ ಚರ್ಚ್ ಆಫ್ ಇಂಡಿಯಾದ ಗಂಗಾವತಿ ಶಾಖೆಯ ಆಡಳಿತ ಮಂಡಳಿಯ ಸದಸ್ಯರಾದ ದೇವ್‌ಪುತ್ರ, ಆಡಂ ಚೌಡೇಕರ್, ಅರುಣಾ ವಸ್ತ್ರದ, ಲಕ್ಷ್ಮಿ ತಿಮ್ಮಪ್ಪ, ರೂಬೀನಾ ಮೀರಜ್‌ಕರ್, ಶಾಮಣ್ಣ ಹೊಬಟ್ಟಿ ಮೊದಲಾದವರು ನೇತೃತ್ವ ವಹಿಸಿಕೊಂಡಿದ್ದರು.

ಹೇಮಾ ಸುಧಾಕರ, ಸುಮಿತ್ರಾ ಸುಧಾಕರ, ನೀಲವೇಣಿ ಸೋನ್ಸ್, ಸರ್ವೇಶ್ ವಸ್ತ್ರದ, ಪ್ರಕಾಶ ಸೋನ್ಸ್, ಡಾ. ಸುಮಿತ್ರಾನಂದ, ಹೇಮಲತಾ ವಸ್ತ್ರದ, ಅನಿಲ್ ಎಡ್ವರ್ಡ್, ಪಿಡಬ್ಲೂಡಿ ಎಂಜಿನಿಯರ್‌ಗಳಾದ ವಿಜಯಕುಮಾರ, ರಾಜೇಶ ವಸ್ತ್ರದ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.