ಹನುಮಸಾಗರ: ‘ಗ್ರಾಮದ ವಿವಿಧ ಭಾಗಗಳಲ್ಲಿ ರಸ್ತೆಗಳನ್ನು ಸಿ.ಸಿ ರಸ್ತೆಯನ್ನಾಗಿ ಪರಿವರ್ತಿಸಲಾಗಿದ್ದು, ಉಳಿದ ರಸ್ತೆಗಳು ಮುಂದಿನ ದಿನಗಳಲ್ಲಿ ಸಿ.ಸಿ ರಸ್ತೆಗಳಾಗಲಿವೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶಿವಪುತ್ರಪ್ಪ ಕೋಳೂರ ಹೇಳಿದರು. ಭಾನುವಾರ ವಿವಿಧ ರಸ್ತೆಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಅವರು ಮಾಹಿತಿ ನೀಡಿದರು.
‘ಸಾರ್ವಜನಿಕರ ಒತ್ತಡ ಹಾಗೂ ತೀರಾ ಅವಶ್ಯ ಕಂಡು ಬಂದಿರುವ ಬೀದಿಗಳನ್ನು ಸದ್ಯ ಸಿ.ಸಿ ಕಾಮಗಾರಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಪರಪ್ಪ ಶಿಂಹಾಸನ ಅವರ ಮನೆಯಿಂದ ಚೌಕದಾರ ಮನೆಯವರೆಗಿನ ರಸ್ತೆ ತೀರಾ ಹದಗೆಟ್ಟಿದ್ದು ₹2.50 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಕೊಳ್ಳಲಾಗುತ್ತದೆ.
ಅಲ್ಲದೆ ಮುರುಳೆಪ್ಪ ಅವರ ಮನೆಯ ಸಮೀಪದ ರಸ್ತೆಯಿಂದ ಬನಶಂಕರಿ ರಸ್ತೆಯವರೆಗೆ ₹1.50 ಲಕ್ಷ ಹಾಗೂ ದೇವಾಂಗ ಸಮುದಾಯ ಭವನದಿಂದ ಸಂಗಮೇಶ್ವರ ಗುಡಿಯವರೆಗೆ ₹1.50 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ’ ಎಂದು ತಿಳಿಸಿದರು.
‘ದೇವಾಂಗ ಸಮುದಾಯ ಭವನದಿಂದ ಬದಾಮಿ ಮುಖ್ಯರಸ್ತೆ ಸಂಪರ್ಕ ಹೊಂದುವ ಮಧ್ಯದಲ್ಲಿ ದೊಡ್ಡ ಪ್ರಮಾಣದ ಮೂರು ಕಾಲುವೆಗಳಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ಕಿರು ಸೇತುವೆಗಳನ್ನು, ಇಲ್ಲವೆ ಕೊಳವೆಗಳನ್ನು ಅಳವಡಿಸಿ’ ಎಂದು ಶಂಕರ ಸಿನ್ನೂರ, ರಾಘವೇಂದ್ರ, ಮಂಜುನಾಥ ಶಿಂಹಾಸನ, ಬಸವರಾಜ ನೀಲಗಾರ, ಬಸವರಾಜ ಸಿನ್ನೂರ ಆಗ್ರಹಿಸಿದರು. ಮುಖಂಡ ಸುರೇಶ ಸಿನ್ನೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.