ADVERTISEMENT

ಸೂಕ್ತ ವಸತಿ ಸೌಲಭ್ಯ ಕಲ್ಪಿಸಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 13:10 IST
Last Updated 18 ಜನವರಿ 2011, 13:10 IST

ಕೊಪ್ಪಳ: ನಗರದಲ್ಲಿರುವ ಭಜಂತ್ರಿ ಕಾಲೋನಿಗೆ ಮೂಲಸೌಕರ್ಯ ಒದಗಿಸಬೇಕು ಹಾಗೂ ಕಡುಬಡವರಿಗೆ ನಿವೇಶನ ನೀಡಬೇಕು ಎಂದು ಆಗ್ರಹಿಸಿ ಕಾಲೋನಿ ನಿವಾಸಿಗಳು ಭಾರತ ಪ್ರಜಾ ಸತ್ತಾತ್ಮಕ ಯುವಜನ ಫೆಡರೇಶನ್‌ನ (ಡಿ.ವೈ.ಎಫ್.ಐ) ನೇತೃತ್ವದಲ್ಲಿ ಸೋಮವಾರ ಇಲ್ಲಿ ಪ್ರತಿಭಟನೆ ನಡೆಸಿದರು.ಕಾಲೋನಿಯಿಂದ ಅಶೋಕ ವೃತ್ತದ ಮೂಲಕ ಹಾಯ್ದು ನಗರಸಭೆ ವರೆಗೆ ಮೆರವಣಿಗೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು ನಂತರ ನಗರಸಭೆ ಮುಂಭಾಗದಲ್ಲಿ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಪೌರಾಯುಕ್ತ  ರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಂಘಟನೆಯ ತಾಲ್ಲೂಕು ಸಮಿತಿ ಕಾರ್ಯದರ್ಶಿ ಸುಂಕಪ್ಪ ಗದಗ, ಭಜಂತ್ರಿ ಕಾಲೋನಿಯಲ್ಲಿ ಬಹುತೇಕ ಕಡುಬಡವರೇ ವಾಸ ಮಾಡುತ್ತಿದ್ದು, ಮೂಲಸೌಕರ್ಯಗಳು ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.ಸೂಕ್ತ ವಸತಿ ಸೌಲಭ್ಯ ಇಲ್ಲ. ರಸ್ತೆ, ನೀರು ಹಾಗೂ ಬೀದಿದೀಪದಂತಹ ವ್ಯವಸ್ಥೆ ಇಲ್ಲದೇ ಜೀವನ ಸಾಗಿಸು ತ್ತಿದ್ದಾರೆ. ಅಲ್ಲದೇ, ಅಲ್ಲಿನ ನಿವಾಸಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದು ಕೂಡಲೇ ನಿವೇಶನ ಮಂಜೂರು ಮಾಡಬೇಕು ಎಂದು ಅವರು ಒತ್ತಾಯಿಸಿದರು.

ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮದ ಅನುದಾನದಲ್ಲಿ ಜಮೀನು ಖರೀದಿಸಬೇಕು. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಇರುವ ಇಲಾಖೆ ಗಳಿಂದ ಹಣಕಾಸಿನ ನೆರವಿನಿಂದ ಇತರ ಸೌಲಭ್ಯಗಳನ್ನು ಒದಗಿಸಬೇಕು ಎಂದೂ ಅವರು ಮನವಿ ಮಾಡಿದರು. ಕಾಲೋನಿಯಲ್ಲಿರುವ ಸಮುದಾಯ ಭವನದ ಬಳಿ ಮರ್ಕ್ಯುರಿ ದೀಪ ಅಳವಡಿಸಬೇಕು, ಶೌಚಾಲಯ ಬಳಕೆಗೆ ಹಣ ವಸೂಲಿ ಮಾಡುವುದನ್ನು ನಿಲ್ಲಿಸ ಬೇಕು ಎಂದೂ ಅವರು ಒತ್ತಾಯಿಸಿ ದರು.

ಕಾಲೋನಿ ಘಟಕದ ಅಧ್ಯಕ್ಷೆ ದುರಗಮ್ಮ ದೊಡ್ಡಮನಿ, ಕಾರ್ಯ ದರ್ಶಿ ರತ್ನಮ್ಮ ಭಜಂತ್ರಿ, ಹುಲುಗಪ್ಪ ಗೋಕಾವಿ, ರೇಣುಕಾ ಪರಿಮಳದ, ಎಸ್.ಎಫ್.ಐ.ನ ಜಿಲ್ಲಾ ಅಧ್ಯಕ್ಷ ಗುರುರಾಜ ದೇಸಾಯಿ,ಸುಭಾನ್ ಸೈಯದ್ ಹಾಗೂ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.